ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬೆಂಗಳೂರು ನಿವಾಸಿಗಳು ತಮ್ಮ ತಮ್ಮ ಊರುಗಳತ್ತ ಮುಖ ಮಾಡ್ತಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲ ಖಾಸಗಿ ಬಸ್ ಕಂಪನಿಗಳು ಟಿಕೆಟ್ ದರವನ್ನು ದಿಢೀರ್ ಹೆಚ್ಚಿಸಿದ್ದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಹಬ್ಬದ ಮುನ್ನಾದಿನದಂದು ಖಾಸಗಿ ಬಸ್ಗಳಲ್ಲಿ ಬಹುತೇಕ ಎಲ್ಲಾ ಸೀಟುಗಳು ಫುಲ್ ಆಗಿವೆ. ಕೆಲವು ಬಸ್ಗಳಲ್ಲಿ ಕೆಲವೇ ಸೀಟುಗಳು ಮಾತ್ರ ಉಳಿದಿವೆ. ಇದರಿಂದ ಹಬ್ಬಕ್ಕೆಂದು ನಗರಕ್ಕೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ, 2 ಶನಿವಾರ ಮತ್ತು 3 ಭಾನುವಾರ ಮೂರು ದಿನ ಹಬ್ಬ ಹಾಗೂ ರಜೆ ಇರುವುದರಿಂದ ಜನ ಊರುಗಳತ್ತ ಮುಖ ಮಾಡಿದ್ದಾರೆ. ಪ್ರಯಾಣಿಕರ ಬೇಡಿಕೆಯಿಂದಾಗಿ, ಹಬ್ಬದ ಹಿಂದಿನ ದಿನಗಳಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರವು ದ್ವಿಗುಣಗೊಳ್ಳಬಹುದು, ಹೀಗಾಗಿ ಸಾರಿಗೆ ಇಲಾಖೆ ಖಾಸಗಿ ಬಸ್ಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.
ಇಂದಿನಿಂದಲೇ ಹಬ್ಬದವರೆಗೂ ವಿಶೇಷ ತನಿಖಾ ತಂಡಗಳನ್ನು ರಚಿಸಿ, ರಾಜ್ಯಾದ್ಯಂತ ಬಸ್ಗಳ ತಪಾಸಣೆ ನಡೆಸಲಿದೆ. ಜೊತೆಗೆ ದರ ಏರಿಕೆ ಮಾಡಿದ ಬಸ್ಗಳ ನೋಂದಣಿ ಅಮಾನತು ಮಾಡಲು ಮುಂದಾಗಿದೆ ಎಂದು ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.