ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಮುಂಜಾನೆಯ ದಿನಚರಿಗೆ ತನ್ನದೇ ಆದ ಪವಿತ್ರ ಹಿನ್ನೆಲೆ ಇದೆ. ಸೂರ್ಯ ಮೂಡುವ ಮುನ್ನವೇ ಎದ್ದು, ಅಂಗಳವನ್ನು ಗುಡಿಸಿ, ನೀರು ಚಿಮುಕಿಸಿ, ಬಣ್ಣ ಬಣ್ಣದ ರಂಗೋಲಿ ಇಡುವುದು ನಮ್ಮ ಹೆಣ್ಣುಮಕ್ಕಳ ದೈನಂದಿನ ಕಾಯಕ. ಇಂದು ನಗರ ಜೀವನದ ಧಾವಂತದಲ್ಲಿ ರಂಗೋಲಿ ಕೇವಲ ಹಬ್ಬಗಳಿಗೆ ಸೀಮಿತವಾಗುತ್ತಿದ್ದರೂ, ಅದರ ಹಿಂದೆ ಅಡಗಿರುವ ಧಾರ್ಮಿಕ, ಸಾಮಾಜಿಕ ಮತ್ತು ವೈಜ್ಞಾನಿಕ ರಹಸ್ಯಗಳು ಮಾತ್ರ ಅದ್ಭುತವಾಗಿವೆ. ರಂಗೋಲಿ ಎನ್ನುವುದು ಕೇವಲ ಕಲೆಯಲ್ಲ; ಅದು ಮನೆಯ ಹೊಸ್ತಿಲಿಗೆ ಹಾಕುವ ರಕ್ಷಣಾ ಕವಚ. ಹಾಗಾದರೆ, ಈ ಸಾಂಪ್ರದಾಯಿಕ ಕಲೆಯ ಮಹತ್ವವೇನು ಎಂಬುದರ ಬಗ್ಗೆ ತಿಳಿಯೋಣ.
ಧನಲಕ್ಷ್ಮಿಯ ಸ್ವಾಗತ ಮತ್ತು ಸಕಾರಾತ್ಮಕ ಶಕ್ತಿ
ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಸ್ವಚ್ಛ ಹಾಗೂ ಸುಂದರವಾದ ರಂಗೋಲಿ ಇರುವ ಮನೆಗೆ ಧನಲಕ್ಷ್ಮಿ ಆಕರ್ಷಿತಳಾಗುತ್ತಾಳೆ. ಹೊಸ್ತಿಲನ್ನು ಮನೆಯ ಮುಖವೆಂದು ಪರಿಗಣಿಸಲಾಗುತ್ತದೆ. ರಂಗೋಲಿಯಲ್ಲಿ ಬಳಸುವ ಜ್ಯಾಮಿತೀಯ ರೇಖೆಗಳು ಮತ್ತು ಸಿಮೆಟ್ರಿಕಲ್ ವಿನ್ಯಾಸಗಳು ನೈಸರ್ಗಿಕ ಯಂತ್ರಗಳಂತೆ ಕೆಲಸ ಮಾಡುತ್ತವೆ. ಇವು ಹೊರಗಿನ ನಕಾರಾತ್ಮಕ ಶಕ್ತಿಯನ್ನು ಅಲ್ಲೇ ತಡೆದು, ಮನೆಯೊಳಗೆ ಕೇವಲ ಧನಾತ್ಮಕ ಚೈತನ್ಯವನ್ನು ಮಾತ್ರ ಪ್ರವೇಶಿಸುವಂತೆ ಮಾಡುತ್ತವೆ ಎಂದು ಆಧ್ಯಾತ್ಮಿಕ ಶಾಸ್ತ್ರ ಹೇಳುತ್ತದೆ.
‘ಭೂತ ಯಜ್ಞ’ ಮತ್ತು ಜೀವರಾಶಿಗಳ ಪೋಷಣೆ
ಪ್ರಾಚೀನ ಕಾಲದಲ್ಲಿ ರಂಗೋಲಿಯನ್ನು ಕೃತಕ ಬಣ್ಣಗಳಿಂದ ಹಾಕುತ್ತಿರಲಿಲ್ಲ; ಬದಲಿಗೆ ಶುದ್ಧವಾದ ಅಕ್ಕಿ ಹಿಟ್ಟಿನಿಂದ ಬಿಡಿಸುತ್ತಿದ್ದರು. ಇದರ ಹಿಂದೆ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬ ವಿಶಾಲ ಭಾವನೆ ಇತ್ತು. ಬೆಳಿಗ್ಗೆ ಹಸಿದು ಬರುವ ಇರುವೆಗಳು, ಕೀಟಗಳು ಮತ್ತು ಪಕ್ಷಿಗಳಿಗೆ ಈ ಅಕ್ಕಿ ಹಿಟ್ಟು ಸುಲಭವಾಗಿ ಆಹಾರವಾಗುತ್ತಿತ್ತು. ತನ್ಮೂಲಕ ಮನುಷ್ಯನು ತನಗರಿವಿಲ್ಲದಂತೆಯೇ ದಿನದ ಆರಂಭದಲ್ಲಿ ಇತರೆ ಜೀವಿಗಳಿಗೆ ದಯೆ ತೋರುವ ‘ಭೂತ ಯಜ್ಞ’ದ ಪುಣ್ಯವನ್ನು ಸಂಪಾದಿಸುತ್ತಿದ್ದ.
ಇದನ್ನೂ ಓದಿ:
ಒತ್ತಡ ನಿವಾರಕ ಮತ್ತು ಮಿದುಳಿಗೆ ವ್ಯಾಯಾಮ
ವಿಜ್ಞಾನದ ಪ್ರಕಾರ, ರಂಗೋಲಿ ಬಿಡಿಸುವುದು ಒಂದು ಅತ್ಯುತ್ತಮ ‘ಮೈಂಡ್ಫುಲ್ನೆಸ್’ ಪ್ರಕ್ರಿಯೆ. ಚುಕ್ಕೆಗಳನ್ನು ನಿಖರವಾಗಿ ಇಟ್ಟು, ಅವುಗಳ ನಡುವೆ ಸಿಲುಕದಂತೆ ರೇಖೆಗಳನ್ನು ಎಳೆಯುವಾಗ ಮೆದುಳಿನ ಎಡ ಮತ್ತು ಬಲ ಭಾಗಗಳು ಏಕಕಾಲಕ್ಕೆ ಚುರುಕಾಗುತ್ತವೆ. ಇದು ತೀಕ್ಷ್ಣವಾದ ಏಕಾಗ್ರತೆಗೆ ಸಹಕಾರಿ. ಬೆಳಿಗ್ಗೆ ಎದ್ದ ತಕ್ಷಣ ಪ್ರಕೃತಿಯ ಬೆಳಕಿನಲ್ಲಿ ರಂಗೋಲಿಯ ಗಾಢ ಬಣ್ಣಗಳನ್ನು ನೋಡುವುದರಿಂದ ಮನಸ್ಸಿನಲ್ಲಿರುವ ಆತಂಕ, ಒತ್ತಡ ದೂರವಾಗಿ, ಮೆದುಳಿನಲ್ಲಿ ಹ್ಯಾಪಿ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ.
ದೈಹಿಕ ಆರೋಗ್ಯಕ್ಕೆ ಪೂರಕ
ಬೆಳಗಿನ ಜಾವದ ಶುದ್ಧ ಗಾಳಿಯಲ್ಲಿ ತಲೆಬಾಗಿ, ಸೊಂಟ ಬಗ್ಗಿಸಿ ನೆಲದ ಮೇಲೆ ರಂಗೋಲಿ ಇಡುವ ಭಂಗಿಯು ಯೋಗದ ಆಸನಗಳನ್ನು ಹೋಲುತ್ತದೆ. ಇದು ಮಹಿಳೆಯರ ಬೆನ್ನುಮೂಳೆ, ಹೊಟ್ಟೆಯ ಸ್ನಾಯುಗಳು ಹಾಗೂ ಕೈಬೆರಳುಗಳ ಕೀಲುಗಳಿಗೆ ಉತ್ತಮ ಕಸರತ್ತನ್ನು ನೀಡುತ್ತದೆ. ಇದು ದಿನವಿಡೀ ದೈಹಿಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.



