ಬೆಂಗಳೂರು ರಕ್ಷಣಾ ವಲಯದ ಅಗತ್ಯ ಪೂರೈಸುವ ಪ್ರಮುಖ ಕೇಂದ್ರವಾಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಬೆಂಗಳೂರು ನಗರ ರಕ್ಷಣಾ ವಲಯದ ಅಗತ್ಯಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಞಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರಿನಲ್ಲಿ 180ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ರಕ್ಷಣಾ ವಲಯ ಹಾಗೂ ಖಾಸಗಿ ವಲಯದ ಸಂಶೋಧನಾ ಕೇಂದ್ರಗಳಿವೆ. ಕೌಶಲಭರಿತ ಮಾನವ ಸಂಪನ್ಮೂಲ ಈ ಕ್ಷೇತ್ರದಲ್ಲಿದೆ. ರಕ್ಷಣಾ ಉತ್ಪಾದನೆ, ಸೆಮಿಕಂಡಕ್ಟರ್ ಕೈಗಾರಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ನೆರವು ಒದಗಿಸುವಂತೆ ಕೇಂದ್ರ ರಕ್ಷಣಾ ಸಚಿವರಲ್ಲಿ ಮನವಿ ಮಾಡಿದರು.

ಡಿ.ಆರ್.ಡಿ.ಒ. ಸಂಶೋಧನೆಗಳ ಮುಂಚೂಣಿ ಸಂಸ್ಥೆ
ರಕ್ಷಣಾ ವಲಯ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರ ನಾಯಕತ್ವದಲ್ಲಿ ಮುಂಚೂಣಿಯಲ್ಲಿದ್ದು, ದೇಶ ಸುರಕ್ಷಿತವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿದ್ದು, ವಿಶ್ವ ಭಾರತದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶದ ಸುಭದ್ರ ಹಾಗೂ ಬಲಿಷ್ಟ ರಕ್ಷಣಾ ವಲಯ. ಡಿ.ಆರ್.ಡಿ.ಒ. ನಡೆಸುವ ಸಂಶೋಧನೆ ಹಾಗೂ ಪರೀಕ್ಷೆಗಳು ಯಶಸ್ವಿಯಾಗಿ, ದೇಶದ ಶಕ್ತಿಯನ್ನು ವೃದ್ಧಿಸಲು ಹಾಗೂ ಬಲಿಷ್ಟಗೊಳಿಸುವಲ್ಲಿ ಸಹಕರಿಸಲಿದೆ. ಡಿ.ಆರ್.ಡಿ.ಒ. ಎಲ್ಲ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದೆ.

ಎಫ್.ಸಿ.ಎಸ್. ಕಟ್ಟಡ ಒಂದು ಚಮತ್ಕಾರ 
ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಮಾದರಿ ಹಾಗೂ ಅದರ ತಂತ್ರಜ್ಞಾನವನ್ನು ಬಳಸಿ ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ಮೂಲಕ ಸಂಪನ್ಮೂಲ ಹಾಗೂ ಸಮಯದ ಮಿತವ್ಯಯ ಮಾಡಬಹುದಾಗಿದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಸರಕಾರದ ಆಶಯದಲ್ಲಿ ಡಿ.ಆರ್.ಡಿ.ಒ. ಸಹಕಾರ ನೀಡಬೇಕು ಎಂದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕೇವಲ 45 ದಿನಗಳಲ್ಲಿ ನಿರ್ಮಿಸಿರುವ ಫ್ಲೈಟ್ ಕಂಟ್ರೋಲ್ ಸಿಸ್ಟಂ ಒಂದು ಚಮತ್ಕಾರವಾಗಿದೆ. ಒಂದು ಟೆಂಡರ್ ಪ್ರಕ್ರಿಯೆ ಅವಧಿಯಲ್ಲಿ 6 ಮಹಡಿ ಕಟ್ಟಡವನ್ನು ಕಟ್ಟಿರುವುದು ಯಾವುದೇ ಚಮತ್ಕಾರಕ್ಕಿಂತಲೂ ಕಡಿಮೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಯೋಜನೆಯೂ ಸೇರಿದಂತೆ ಈ ಕಟ್ಟಡ ನಿರ್ಮಾಣಕ್ಕೆ 65 ದಿನಗಳೊಳಗಾಗಿ ಅತ್ಯುತ್ತಮ ಕಟ್ಟಡವನ್ನು ನಿರ್ಮಿಸಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಗೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಇಂದು ನನಸಾಗಿದೆ. ಖಾಸಗಿಯವರೊಂದಿಗೆ ಸಮನ್ವಯ, ತಂತ್ರಜ್ಞಾನ, ಆರ್ ಆ್ಯಂಡ್ ಡಿ ಮುಂತಾವುಗಳನ್ನು ಖಾಸಗಿ ವಲಯದಲ್ಲಿ ಬಳಕೆ ಮಾಡಬಹುದು ಎಂದರು.

ರಕ್ಷಣಾ ಸಚಿವರ ಬದ್ಧತೆ 
ವಿಶ್ವದಲ್ಲಿಯೇ ಅತ್ಯಂತ ದಕ್ಷ ನಿರ್ಮಾಣ ಸಂಸ್ಥೆಯಾಗಿರುವ ಎಲ್ ಆ್ಯಂಡ್ ಟಿ ಸಂಸ್ಥೆಯು ರಕ್ಷಣಾ ಸಂಸ್ಥೆಗಳ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ರಾಜ್ ನಾಥ್ ಸಿಂಗ್ ಅವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವವರು. ನುಡಿದಂತೆ ನಡೆಯುವ ಸ್ವಭಾವದವರು. ಭಾರತಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿಯೂ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ಇದು ಭಾರತದಂಥ ದೊಡ್ಡ ದೇಶಗಳಿಗೆ ಅಗತ್ಯವೂ ಹೌದು. ಅವರ ಬದ್ಧತೆಯಿಂದ ಈ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!