ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಏರುಪೇರಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಯು ಗುಣಮಟ್ಟವು ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. ಆದರೆ, ಬೆಂಗಳೂರಿನ ಪರಿಸ್ಥಿತಿ ಮಾತ್ರ ತಜ್ಞರ ಪ್ರಕಾರ ಇನ್ನೂ ಆಶಾದಾಯಕವಾಗಿಲ್ಲ.
ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿತ್ತು. ಸದ್ಯದ ಅಂಕಿಅಂಶಗಳ ಪ್ರಕಾರ, ನಗರದ AQI 110ಕ್ಕೆ ತಲುಪುವ ಮೂಲಕ ಸಣ್ಣ ಸುಧಾರಣೆ ತೋರಿದೆ. ಆದರೂ, ವಿಶ್ವ ಆರೋಗ್ಯ ಸಂಸ್ಥೆಯ ಕಟ್ಟುನಿಟ್ಟಾದ ಮಾನದಂಡಗಳನ್ನು ಗಮನಿಸಿದರೆ, ಈ ಮಟ್ಟದ ವಾಯು ಗುಣಮಟ್ಟವು ಆರೋಗ್ಯಕ್ಕೆ ಹಾನಿಕರವಾಗಿದೆ. ಅಂಕೆಗಳಲ್ಲಿ ಇಳಿಕೆ ಕಂಡುಬಂದರೂ, ನಗರದ ಗಾಳಿ ಇನ್ನೂ ‘ಅನಾರೋಗ್ಯಕರ’ ಶ್ರೇಣಿಯಲ್ಲೇ ಉಳಿದಿರುವುದು ಕಳವಳಕಾರಿ ಸಂಗತಿ.
ಬೆಂಗಳೂರಿಗೆ ಹೋಲಿಸಿದರೆ ಹುಬ್ಬಳ್ಳಿಯ ಪರಿಸ್ಥಿತಿ ಇಂದು ಅತ್ಯಂತ ಉತ್ತಮವಾಗಿದೆ. ಇಲ್ಲಿನ ಏರ್ ಕ್ವಾಲಿಟಿ ಸೂಚ್ಯಂಕವು ಕೇವಲ 73ರಷ್ಟಿದ್ದು, ರಾಜ್ಯದ ಇತರ ನಗರಗಳಿಗಿಂತ ಶುದ್ಧವಾದ ಗಾಳಿ ಇಲ್ಲಿ ಲಭ್ಯವಿದೆ. ಕೈಗಾರಿಕಾ ಚಟುವಟಿಕೆಗಳ ನಡುವೆಯೂ ಹುಬ್ಬಳ್ಳಿ ಉತ್ತಮ ಪರಿಸರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರಾವಳಿ ನಗರಿ ಮಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಮಾಲಿನ್ಯದ ಮಟ್ಟ ಭಾರಿ ಏರಿಕೆ ಕಂಡಿತ್ತು. ಅನೇಕ ಬಾರಿ AQI 200ರ ಗಡಿ ದಾಟುವ ಮೂಲಕ ‘ಅಪಾಯಕಾರಿ’ ಮಟ್ಟಕ್ಕೆ ತಲುಪಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಮಂಗಳೂರಿನ ವಾಯು ಗುಣಮಟ್ಟದಲ್ಲಿ ಚೇತರಿಕೆ ಕಂಡುಬಂದಿದ್ದು, ಮಾಲಿನ್ಯದ ತೀವ್ರತೆ ಕಡಿಮೆಯಾಗಿದೆ.
ವಾಯು ಗುಣಮಟ್ಟದ ಅಂಕಿಅಂಶಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆಯಾದರೂ, ಬೆಂಗಳೂರಿನಂತಹ ದಟ್ಟಣೆಯ ನಗರಗಳಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಮಾಲಿನ್ಯದ ಪರಿಣಾಮಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.



