ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.
ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದ ಭಜನ್ ಲಾಲ್ ಶರ್ಮ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್ ಮಂಗಳವಾರ ಘೋಷಣೆ ಮಾಡಿದೆ.
ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದ ಬಳಿಕ ರಾಜಸ್ಥಾನಕ್ಕೂ ಬಿಜೆಪಿ ಹೊಸ ಮುಖವನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಬ್ರಾಹ್ಮಣ ಸಮುದಾಯದ ಭಜನ್ಲಾಲ್ ಶರ್ಮ, ಭರತ್ಪುರ ಮೂಲದವರಾಗಿದ್ದಾರೆ.
ದೆಹಲಿಯ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯ ನಂತರ ಭಜನ್ಲಾಲ್ ಶರ್ಮಾ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಭರತ್ಪುರದ ನಿವಾಸಿ ಭಜನ್ಲಾಲ್ ಶರ್ಮಾ ಬಹಳ ವರ್ಷಗಳಿಂದ ಬಿಜೆಪಿಯ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಅವರಲ್ಲಿದೆ. ಬಿಜೆಪಿ ಅವರನ್ನು ಜೈಪುರದ ಸಂಗನೇರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ತಿಳಿಸಿತ್ತು.
ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ವಿನೋದ್ ತಾವ್ಡೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ನೇಮಕ ಮಾಡಿತ್ತು. ಇಂದು ಮಧ್ಯಾಹ್ನ ಮೂವರು ನಾಯಕರು ಜೈಪುರ ತಲುಪಿ ಶಾಸಕರೊಂದಿಗೆ ಸಭೆ ನಡೆಸಿದರು. ಇಂದು ಮಧ್ಯಾಹ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ವಸುಂಧರಾ ರಾಜೇ ಅವರನ್ನು ಭೇಟಿ ಮಾಡಿದರು. ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜನಾಥ್ ಸಿಂಗ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಂತಿಮವಾಗಿ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.