ಹೊಸದಿಗಂತ ಡಿಜಿಟಲ್ ಡೆಸ್ಕ್
ಮಧ್ಯಪ್ರದೇಶದ ಇಂದೋರ್ನಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಬಿದ್ದು ಗಾಯಗೊಂಡಿದ್ದಾರೆ. ಕಾಲ್ತುಳಿತದಲ್ಲಿ ಸಿಲುಕಿದ ಕಾಂಗ್ರೆಸ್ ಮುಖಂಡನ ಕೈ ಮತ್ತು ಮೊಣಕಾಲಿನ ಮೇಲೆ ಗಾಯಗಳಾಗಿವೆ. ವರದಿಗಳ ಪ್ರಕಾರ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕರಾದ ಜನರು ಒಟ್ಟಿಗೆ ಧಾವಿಸಿದ್ದರಿಂದ ಜನಸಂದಣಿ ಉಂಟಾಗಿದೆ. ದುರದೃಷ್ಟವಶಾತ್, ಪೊಲೀಸರಿಗೆ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಯಾತ್ರೆಗಾಗಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ವೇಣುಗೋಪಾಲ್ ಪ್ರಥಮ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಾರಾಂತ್ಯದಲ್ಲಿ ಕೆಸಿ ವೇಣುಗೋಪಾಲ್, ಬಿಜೆಪಿಯು ಭಾರತ್ ಜೋಡೋ ಯಾತ್ರೆ ಮೆರವಣಿಗೆ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದರು. ಪಾದಯಾತ್ರೆಯ ಫಲಿತಾಂಶದ ಬಗ್ಗೆ ಬಿಜೆಪಿಗೆ ಭಯವಿದೆ. ಅದಕ್ಕಾಗಿ ನಮ್ಮ ದಾರಿಗೆ ಅಡ್ಡ ಬರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ