Thursday, March 23, 2023

Latest Posts

ಭೋಪಾಲ್‌ ಅನಿಲ ದುರಂತ: ಹೆಚ್ಚಿನ ಪರಿಹಾರ ಕೋರಿ ಸುಪ್ರೀಂಗೆ ಸಲ್ಲಿಸಿದ ಅರ್ಜಿ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

1984ರ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಯೂನಿಯನ್ ಕಾರ್ಬೈಡ್‌ನಿಂದ ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿರುವ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.1984ರ ಭೋಪಾಲ್ ಅನಿಲ ದುರಂತಕ್ಕೆ 3,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಯೂನಿಯನ್ ಕಾರ್ಬೈಡ್‌ನಿಂದ ಹೆಚ್ಚುವರಿ 7.4 ಕೋಟಿ ರೂ. ಪರಿಹಾರ ಕೋರಿ ಕೇಂದ್ರದ 2010ರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ತೀರ್ವ ಹಿನ್ನಡೆಯಾಗಿದೆ.

ಪ್ರಕರಣವನ್ನು ಪುನಃ ತೆರೆಯಬೇಕು ಮತ್ತು ಅನಿಲ ಸೋರಿಕೆ ದುರಂತದ ಸಂತ್ರಸ್ತರಿಗೆ 7,844 ಕೋಟಿ ರೂ. ಮೌಲ್ಯದ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಯೂನಿಯನ್ ಕಾರ್ಬೈಡ್‌ಗೆ ನಿರ್ದೇಶಿಸಬೇಕು ಎಂದು ಕೇಂದ್ರವು ಕೋರಿತ್ತು. ಅದಾಗ್ಯೂ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಅರ್ಜಿಯನ್ನು ತಿರಸ್ಕರಿಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ವಂಚನೆಯ ಆಧಾರದ ಮೇಲೆ ಮಾತ್ರ ಇತ್ಯರ್ಥವನ್ನು ಬದಿಗಿರಿಸಬಹುದು ಮತ್ತು ಕೇಂದ್ರವು ಈ ವಿಷಯದಲ್ಲಿ ಯಾವುದೇ ವಾದವನ್ನು ಮಾಡಿರುವುದಿಲ್ಲ ಎಂದು ಹೇಳಿದೆ.

ಎರಡು ದಶಕಗಳ ನಂತರವೂ ಈ ವಿಷಯವನ್ನು ಪ್ರಸ್ತಾಪಿಸಲು ಕೇಂದ್ರವು ಯಾವುದೇ ತರ್ಕವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ 50 ಕೋಟಿ ರೂ. ಮೊತ್ತವನ್ನು ಬಾಕಿ ಇರುವ ಪರಿಹಾರದ ಕ್ಲೈಮ್‌ಗಳನ್ನು ಕ್ಲಿಯರ್ ಮಾಡಲು ಬಳಸಿಕೊಳ್ಳುವಂತೆ ನಿರ್ದೇಶನ ಕೂಡ ಕೊಟ್ಟಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಅಭಯ್ ಎಸ್ ಓಕಾ, ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆಕೆ ಮಹೇಶ್ವರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಜನವರಿ 12 ರಂದು ಕ್ಯುರೇಟಿವ್ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!