ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾದ 400 ವರ್ಷದ ಇತಿಹಾಸ ಹೊಂದಿರುವ ಬೆಂಗಳೂರು ದೊಡ್ಡಾಲದ ಮರವೂ ಇನ್ನೂ ಕೇವಲ ನೆನಪು ಮಾತ್ರ.
ಹೌದು, ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ದೊಡ್ಡಾಲದಮರದ ಭಾಗವೊಂದು ಬುಡಸಮೇತ ನೆಲಕ್ಕುರುಳಿದೆ. ಹಾಗೆಯೇ ಮರದ ಇತರ ಭಾಗಗಳೂ ಅಪಾಯದ ಅಂಚಿನಲ್ಲಿದೆ.
ಕಳೆದೊಂದು ವಾರದಿಂದ ಸತತ ಸುರಿದ ಮಳೆಯಿಂದಾಗಿ ಮರದ ಭಾಗಗಳು ಧರೆಗುರುಳಿರುವ ಸಾಧ್ಯತೆಯಿದೆ ಎಂದು ತೋಟಗಾರಿಕ ಇಲಾಖೆ ಹೇಳಿದೆ.
ಒಂದೆಡೆ ಹುಲ್ಲುಹಾಸು ಮಾಡುವ ಉದ್ದೇಶದಿಂದ ಮರಗಳ ಬುಡದಲ್ಲಿನ ಮಣ್ಣು ತೆಗೆಯಲಾಗಿದೆ. ಹಾಗಾಗಿ ಮಣ್ಣಿಲ್ಲದೇ ಮರವು ಬೀಳುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಮರ ಬೀಳುವ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ಇನ್ನಷ್ಟು ಮರಗಳು ಅಪಾಯದ ಸ್ಥಿತಿಯಲ್ಲಿರುವುದು ಆತಂಕ ಸೃಷ್ಟಿಸಿದೆ.
400 ವರ್ಷದ ಇತಿಹಾಸ ಹೊಂದಿರುವ ಕಾರಣಕ್ಕೆ ಭಾರತದ ಅತ್ಯಂತ ನಾಲ್ಕನೇ ಪುರಾತನ ಆಲದ ಮರ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ. ತೋಟಗಾರಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮರದ ದೊಡ್ಡ ಭಾಗವೊಂದು ಧರೆಗುರುಳಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇತ್ತ ದೊಡ್ಡಾಲದ ಮರದ ಸಮೀಪ ಜನರು ಓಡಾಡುವುದರಿಂದ ಅಪಾಯ ಎದುರಾಗಬಹುದು. ಇಲ್ಲಿನ ಬಹುತೇಕ ಮರಗಳು ಬಾಗಿದ ಸ್ಥಿತಿಯಲ್ಲಿವೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.