ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಬಜೆಟ್ ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ಕೇಂದ್ರ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಬಜೆಟ್, ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ನನಸು ಮಾಡುವ ಬಜೆಟ್ ಇದಾಗಿದೆ. ಯುವಕರಿಗಾಗಿ ಹಲವು ಕ್ಷೇತ್ರಗಳನ್ನು ತೆರೆದಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತ ಯೋಜನೆಗೆ ಸಹಕಾರಿಯಾಗಲಿದೆ.
ಸಾಮಾನ್ಯವಾಗಿ ಸರ್ಕಾರದ ಬೊಕ್ಕಸ ತುಂಬುವುದು ಹೇಗೆ ಎಂಬುದಕ್ಕೆ ಬಜೆಟ್ನಲ್ಲಿ ಗಮನ ನೀಡಲಾಗುತ್ತದೆ, ಆದರೆ ಈ ಬಜೆಟ್ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ ಈ ಬಜೆಟ್ ದೇಶದ ನಾಗರಿಕರ ಜೇಬು ಹೇಗೆ ತುಂಬುತ್ತದೆ, ದೇಶದ ನಾಗರಿಕರ ಉಳಿತಾಯ ಹೇಗೆ ಹೆಚ್ಚಾಗುತ್ತದೆ ಮತ್ತು ದೇಶದ ನಾಗರಿಕರು ಅಭಿವೃದ್ಧಿಯಲ್ಲಿ ಹೇಗೆ ಪಾಲುದಾರರಾಗುತ್ತಾರೆ? ಅದಕ್ಕೆ ಈ ಬಜೆಟ್ ಭದ್ರ ಬುನಾದಿ ಹಾಕಿದೆ.
ಈ ಬಜೆಟ್ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಬಜೆಟ್ ನಲ್ಲಿ ರೈತರಿಗಾಗಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಈ ಬಜೆಟ್ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ಇದು ನಾಗರಿಕರ ಜೇಬು ತುಂಬಿಸುವ ಬಜೆಟ್ ಎಂದು ಪ್ರಧಾನಿ ಮೋದಿ ಹೇಳಿದರು. ಈ ಬಜೆಟ್ನಿಂದ ಸ್ವಾವಲಂಬಿ ಭಾರತಕ್ಕೆ ವೇಗ ಸಿಗಲಿದೆ. ಬಜೆಟ್ನಲ್ಲಿ ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಈ ಬಜೆಟ್ನಲ್ಲಿ ಸ್ಟಾರ್ಟಪ್ಗಳಿಗೆ ಹೊಸ ಸಾಲವನ್ನು ಘೋಷಿಸಲಾಗಿದೆ.
ಈ ಬಜೆಟ್ ಜನರದ್ದು. ಇದು ಜನತಾ ಜನಾರ್ದನ ಬಜೆಟ್. ಇದಕ್ಕಾಗಿ ನಾನು ನಿರ್ಮಲಾ ಸೀತಾರಾಮನ್ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಇಂದು ದೇಶ ಅಭಿವೃದ್ಧಿ ಮತ್ತು ಪರಂಪರೆಯ ಮೇಲೆ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲ್ಲ ಕಡೆಯಿಂದ ಉದ್ಯೋಗ ಸೃಷ್ಟಿಸುವ ಬಜೆಟ್ ಇದಾಗಿದೆ ಎಂದರು.