‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ’ಯ ಮೂಲಕ ಹೆಣ್ಣು ಮಕ್ಕಳಿಗೆ ಭರ್ಜರಿ ಗಿಫ್ಟ್: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಹೆಣ್ಣು ಮಕ್ಕಳಿಗೆ ರಕ್ಷಾ ಬಂಧನದ ಸಂದರ್ಭ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರ್ಜರಿ ಗಿಫ್ಟ್ ನೀಡಿದ್ದು, ‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ’ (CM Kanya Sumangala Yojana) ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದದ ವೇಳೆ ಯೋಜನೆಯ ಹಣವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

ಕನ್ಯಾ ಸುಮಂಗಲಾ ಯೋಜನೆಯ ಮೊತ್ತವನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವ ಯೋಜನೆ ಇದೆ ಎಂದರು.

ಈ ಯೋಜನೆಯಡಿ ಈ ಹಿಂದೆ ಆರು ಹಂತಗಳಲ್ಲಿ 15 ಸಾವಿರ ರೂ.ಗಳ ಪ್ಯಾಕೇಜ್ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಮಗಳು ಹುಟ್ಟಿದ ತಕ್ಷಣ ಆಕೆಯ ಪೋಷಕರ ಖಾತೆಗೆ 5 ಸಾವಿರ ರೂ.ಗಳನ್ನು ವರ್ಗಾಯಿಸಲಾಗುವುದು. ಮಗಳಿಗೆ ಒಂದು ವರ್ಷವಾದಾಗ ಎರಡು ಸಾವಿರ ರೂ, ಮಗಳು ಒಂದನೇ ತರಗತಿಗೆ ದಾಖಲಾದಾಗ ಮೂರು ಸಾವಿರ, ಮಗಳು ಆರನೇ ತರಗತಿಗೆ ಪ್ರವೇಶ ಪಡೆದರೆ ಮೂರು ಸಾವಿರ, ಮಗಳು ಒಂಬತ್ತನೇ ತರಗತಿಗೆ ಹೋದರೆ ಐದು ಸಾವಿರ ರೂ. ಮತ್ತು ಮಗಳು ಯಾವುದೇ ಪದವಿ ಅಥವಾ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಿದರೆ ಏಳು ಸಾವಿರ ರೂಪಾಯಿಗಳನ್ನು ಖಾತೆಗೆ ವರ್ಗಾಯಿಸಲಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ ಮೂಲಕ 1624000 ಸಾವಿರ ಹೆಣ್ಣು ಮಕ್ಕಳಿಗೆ ಪ್ರಯೋಜನ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ಯಾ ಸುಮಂಗಲಾ ಯೋಜನೆಯ ಫಲಾನುಭವಿಗಳಾದ ಕೆಲ ಬಾಲಕಿಯರು ಸಿಎಂ ಯೋಗಿ ಅವರ ಹಣೆಗೆ ತಿಲಕವಿಟ್ಟು, ಕೈಗೆ ರಾಖಿ ಕಟ್ಟಿದರು.

ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಒಂದೇ ಕ್ಲಿಕ್ ಮೂಲಕ 29523 ಫಲಾನುಭವಿ ಹೆಣ್ಣು ಮಕ್ಕಳ ಖಾತೆಗೆ 5.82 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!