ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ ಎದುರಿಸುತ್ತಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎರಡು ವರ್ಷಗಳ ಅವಧಿಗೆ ವಿದೇಶ ಪ್ರವಾಸಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಅನುಮತಿ ನೀಡಿದೆ.
ಎರಡು ವರ್ಷಗಳ ಅವಧಿಗೆ ಅವಕಾಶ
ಪ್ರಕರಣದಲ್ಲಿ ಜಾಮೀನು ಸಂದರ್ಭ ಕೋರ್ಟ್ ವಿಧಿಸಿದ್ದ ಅನುಮತಿ ಇಲ್ಲದೆ ವಿದೇಶ ಪ್ರವಾಸ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಸಡಿಲಗೊಳಿಸುವಂತೆ ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರಿನ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು, ಮುಂದಿನ ಎರಡು ವರ್ಷಗಳ ಅವಧಿಗೆ ವಿದೇಶಗಳಿಗೆ ಭೇಟಿ ನೀಡಲು ಅನುಮತಿ ನೀಡಿ ಆದೇಶ ನೀಡಿದ್ದಾರೆ.
ಷರತ್ತು ವಿಧಿಸಿದ ಕೋರ್ಟ್
ಈ ಸಂದರ್ಭ ಪ್ರವಾಸದ ಕುರಿತು ಸಂಪೂರ್ಣ ವೇಳಾಪಟ್ಟಿ ಮತ್ತು ವಿವರಗಳನ್ನು ತನಿಖಾ ಸಂಸ್ಥೆಗೆ ಮುಂಚಿತವಾಗಿಯೇ ಲಿಖಿತ ರೂಪದಲ್ಲಿ ನೀಡಬೇಕು. ತನಿಖಾ ಸಂಸ್ಥೆ ಅಥವಾ ನ್ಯಾಯಾಲಯವು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂಬ ಸೂಚನೆ ನೀಡಿದೆ. ಒಂದು ವೇಳೆ ಕೋರ್ಟ್ ಷರತ್ತುಗಳನ್ನು ಉಲ್ಲಂಘಿಸಿದರೆ, ವಿದೇಶ ಪ್ರವಾಸದ ಅನುಮತಿಯನ್ನು ರದ್ದುಗೊಳಿಸಲು ಪ್ರಾಸಿಕ್ಯೂಷನ್ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.



