ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಮೆಟ್ರೊಪಾಲಿಟನ್ ನ್ಯಾಯಾಲಯವು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಎರಡನೇ ಸಮನ್ಸ್ ಜಾರಿ ಮಾಡಿದೆ.
ಕೆಲವು ಗೊಂದಲಗಳಿಂದಾಗಿ ಮೊದಲ ಸಮನ್ಸ್ ತೇಜಸ್ವಿ ಅವರಿಗೆ ತಲುಪಿಲ್ಲ.ಈ ಕಾರಣಕ್ಕೆ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಡಿ.ಜೆ. ಪರ್ಮಾರ್ ಅವರು ಎರಡನೇ ಸಮನ್ಸ್ ಜಾರಿ ಮಾಡಿದರು.
ಈ ಸಮನ್ಸ್ ಪ್ರಕಾರ, ಆರ್ಜೆಡಿ ನಾಯಕರೂ ಆದ ತೇಜಸ್ವಿ ಅವರು ಅಕ್ಟೋಬರ್ 13ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ತೇಜಸ್ವಿ ಅವರು ಇದೇ ವರ್ಷದ ಮಾರ್ಚ್ 21ರಂದು ಪಟ್ನಾದಲ್ಲಿ ಮಾಧ್ಯಮಗಳ ಮುಂದೆ ‘ಗುಜರಾತಿಗಳು ಮಾತ್ರ ವಂಚಕರು’ ಎಂದು ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಅಹಮದಾಬಾದ್ನ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ಹರೇಶ್ ಮೆಹ್ತಾ ಸಾಕ್ಷ್ಯಸಮೇತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಡಿ.ಜೆ. ಪರ್ಮಾರ್ ಅವರು ಸೆ. 22ರಂದು ವಿಚಾರಣೆಗೆ ಹಾಜರಾಗುವಂತೆ ಯಾದವ್ ಅವರಿಗೆ ಕಳೆದ ಆಗಸ್ಟ್ 28ರಂದು ಸಮನ್ಸ್ ಜಾರಿ ಮಾಡಿದ್ದರು.