ಹೊಸದಿಗಂತ ವರದಿ, ಮಂಡ್ಯ:
ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ, ಇದರ ನಿವಾರಣೆಗೆ ಇಲ್ಲೊಂದು ಗ್ರಾಮದವರು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಮೂಲಕ ಗಮನೆ ಸೆಳೆದರು.
ಹೌದು, ಪ್ರಸ್ತುತದಲ್ಲಿ ಎದುರಾಗಿರುವ ಭೀಕರ ಬರಗಾಲ ತಪ್ಪಿಸಲು ಹಾಗೂ ಶೀಘ್ರದಲ್ಲಿ ಉತ್ತಮ ಮಳೆಗಾಗಿ ಗ್ರಾಮೀಣ ಪ್ರದೇಶದ ಆಚರಣೆಯಾದ ಕಪ್ಪೆಗಳಿಗೆ ಮದುವೆ ಮಾಡಿ ಮಳೆರಾಯನ ಮೊರೆ ಹೋದವರು, ಸಮೀಪದ ಕೆ.ಪಿ.ದೊಡ್ಡಿಯ ಗ್ರಾಮಸ್ಥರು ಹಾಗೂ ಯುವಕರು.
ಇವರು, ಮಳೆರಾಯನ ಆಗಮನಕ್ಕೆ ಹಾಗೂ ಶೀಘ್ರವಾಗಿ ಉತ್ತಮ ಮಳೆಯಾಗಿ ನಾಡು ಎದುರಿಸುತ್ತಿರುವ ಭೀಕರ ಬರ ತೋಲಗಲಿ ಎಂದು ವಿಶೇಷವಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಕೈಗೊಂಡು ವಿಶಿಷ್ಟವಾಗಿ ಕಪ್ಪೆಗಳಿಗೆ ಮದುವೆ ಮಾಡಿ ಗ್ರಾಮಸ್ಥರ ಜೊತೆಗೂಡಿ ಅನ್ನ ಸಂತರ್ಪಣೆ ನಡೆಸಲಾಯಿತು.
ಕೆ.ಪಿ.ದೊಡ್ಡಿ ಹಾಗೂ ಮಣಿಗೆರೆ ಹಾಗೂ ಸುತ್ತಮುತ್ತಲಿನ ಸುಮಾರು 500ಕ್ಕೂ ಹೆಚ್ಚಿನ ಜನರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ, ಮಳೆಗಾಗಿ ಪ್ರಾರ್ಥನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.