ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಪೋರ್ಜಾಯ್ ಚಂಡಮಾರುತ (Biporjoy cyclone )ಹಿನ್ನಲೆ ವಿಪತ್ತು ನಿರ್ವಹಣೆ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರ ಜತೆ ಸಭೆ ನಡೆಸಿದರು.
ಈ ವೇಳೆ ಅವರು 8000 ಕೋಟಿ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ಒಟ್ಟು ರೂ 5,000 ಕೋಟಿಗಳ ಯೋಜನೆ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ಮಹಾನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ರೂ 2,500 ಕೋಟಿ ಹಣ ಅನುದಾನ ಮತ್ತು ನಗರ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು ಮತ್ತು ಭೂಕುಸಿತವನ್ನು ತಗ್ಗಿಸಲು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 825 ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಚಂಡಮಾರುತದ ಸನ್ನದ್ಧತೆಯ ಬಗ್ಗೆ ವಿವರಿಸಿದ್ದು, ವಿಪತ್ತು ನಿಭಾಯಿಸಲು ಸರ್ಕಾರ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಹೇಳಿದರು.
ಕಳೆದ ಒಂಬತ್ತು ವರ್ಷಗಳಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿವೆ. ಯಾರೂ ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾವು ಹೀಗೆ ಇರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ವಿಪತ್ತುಗಳು ಅವುಗಳ ಸ್ವರೂಪವನ್ನು ಬದಲಾಯಿಸಿವೆ. ಅವುಗಳ ಆವರ್ತನ ಮತ್ತು ತೀವ್ರತೆಯು ಹೆಚ್ಚಾಗಿದೆ. ನಾವು ಹೆಚ್ಚು ವ್ಯಾಪಕವಾದ ಯೋಜನೆಯನ್ನು ಮಾಡಬೇಕಾಗಿದೆ ಎಂದಿದ್ದಾರೆ.
ಅದೇ ವೇಳೆ ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ರಾಜ್ಯಗಳಿಗೆ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನುಸರಿಸಲು ಕಟ್ಟುನಿಟ್ಟಾದ ಪ್ರೋಟೋಕಾಲ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.