ದಿಗಂತ ವರದಿ ಮಂಡ್ಯ :
ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮೇಲೆ ಹಲ್ಲೆಗೆ ಮುಂದಾದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಮನಗರ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಇತರರು ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಚಿವ ಅಶ್ವತ್ಥನಾರಾಯಣ ಭಾಷಣಕ್ಕೆ ಅಡ್ಡಿಪಡಿಸಿದ್ದೂ ಅಲ್ಲದೆ, ಹಲ್ಲೆಗೆ ಯತ್ನಸಿರುವುದನ್ನು ತೀವ್ರವಾಗಿ ಖಂಡಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಮಾತನಾಡಿ, ಇಂತಹ ಸಂಸ್ಕೃತಿಯಿಂದ ನಾವು ಯಾವ ಶತಮಾನದಲ್ಲಿದ್ದೇವೆ ಎಂಬುದು ತಿಳಿಯುತ್ತಿಲ್ಲ. ರೌಡಿಗಳಿಗೆ ರಾಜ್ಯಬಾರ ಕೊಟ್ಟರೆ ಏನಾಗುತ್ತದೆ ಎಂಬುದು ಇದರಿಂದ ಸಾಭೀತಾಗಿದೆ. ಡಿ.ಕೆ. ಶಿವಕುಮಾರ್ ಒಬ್ಬರು ಸಂಸದ. ಸರ್ಕಾರಿ ಕಾರ್ಯಕ್ರಮದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ವಿವೇಚನೆ ಇಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಏನಾಗುತ್ತದೆ ಎಂಬುದು ಇದೇ ಉದಾಹರಣೆ ಎಂದು ಕಿಡಿಕಾರಿದರು.
ಸಂಸದರ ಇಂತಹ ವರ್ತನೆ ಬೆಂಗಳೂರು, ಕನಕಪುರ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನವಾಗಿದೆ. ಸುಸಂಸ್ಕೃತ ಜನರಿದ್ದಾರೆ. ಸುತ್ತ ಪಟಾಲಂರನ್ನು ಕಟ್ಟಿಕೊಂಡು ಉಸ್ತುವಾರಿ ಸಚಿವರನ್ನು ಸುತ್ತುವರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.