July 15, 2026
Wednesday, July 15, 2026
spot_img

ಪಿಆರ್‌ಸಿ ಪ್ರಸ್ತಾವನೆ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು: ದೇಶದ ಭದ್ರತೆಗೆ ಧಕ್ಕೆ ಎಂದ ಆರ್.ಅಶೋಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಇಂದು (ಜುಲೈ 15) ರಾಜ್ಯಪಾಲರಿಗೆ ಅಧಿಕೃತವಾಗಿ ದೂರು ನೀಡಿದೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯಸಭಾ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಮತ್ತು ಡಾ. ಕೆ. ಸುಧಾಕರ್ ಸೇರಿದಂತೆ ಪ್ರಮುಖ ನಾಯಕರಿದ್ದ ಬಿಜೆಪಿ ನಿಯೋಗವು ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ದೇಶದ ಭದ್ರತೆಗೆ ಆತಂಕ:

ರಾಜ್ಯ ಸರ್ಕಾರಕ್ಕೆ ಪಿಆರ್‌ಸಿ ನೀಡುವ ಯಾವುದೇ ಕಾನೂನಾತ್ಮಕ ಅಧಿಕಾರ ಇಲ್ಲ. ಈ ಅಧಿಕಾರ ಇರುವುದು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ. ಸರ್ಕಾರದ ಈ ಸಂವಿಧಾನಬಾಹಿರ ನಡೆ ದೇಶದ ಭದ್ರತೆಗೆ ಮತ್ತು ಕನ್ನಡಿಗರ ಹಕ್ಕುಗಳಿಗೆ ದೊಡ್ಡ ಆತಂಕ ತರಲಿದೆ”ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ನಿಯಮಕ್ಕೆ ತಕ್ಷಣವೇ ತಡೆಯೊಡ್ಡುವಂತೆ ರಾಜ್ಯಪಾಲರಲ್ಲಿ ಮಧ್ಯಪ್ರವೇಶಕ್ಕೆ ಬಿಜೆಪಿ ಆಗ್ರಹಿಸಿದೆ.

ಇದನ್ನೂ ಓದಿ:

ಬಾಂಗ್ಲಾ ವಲಸಿಗರಿಗೆ ಕಾರ್ಡ್ ಕೊಡುವ ಸಂಚು:

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರವು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ನಿವಾಸಿಗಳಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ಸಂಚು ರೂಪಿಸಿದೆ. ರಾಜ್ಯದಲ್ಲಿ ಈಗಾಗಲೇ 20 ರಿಂದ 30 ಲಕ್ಷ ಬಾಂಗ್ಲಾದೇಶಿ ವಲಸಿಗರಿದ್ದಾರೆ. ಮುಂಬರುವ ಜಿಬಿಎ, ಜಿ.ಪಂ, ತಾ.ಪಂ ಮತ್ತು ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರಿಗೆ ಅಕ್ರಮವಾಗಿ ಪಿಆರ್‌ಸಿ ನೀಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಅಶೋಕ್ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !