ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೋವೈದ್ಯಕೀಯ ವಿಭಾಗ ಸ್ನಾತಕೋತ್ತರ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ನೀರ್ಚಾಲು ಸಮೀಪದ ಕುಂಟಿಕಾನ ಶಂಕರಮೂಲೆಯಲ್ಲಿರುವ ನಿಡುಗಳ ವೆಂಕಟಕೃಷ್ಣ ಮತ್ತು ಜಯಶ್ರೀ ಇವರ ಪುತ್ರಿ ಡಾ.ದಿವ್ಯಶ್ರೀ ಇವರನ್ನು ಬಿಜೆಪಿ ಬದಿಯಡ್ಕ ಪಶ್ಚಿಮ ವಲಯ ಸಮಿತಿಯ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಬಿಜೆಪಿ ಪಶ್ಚಿಮ ವಲಯ ಅಧ್ಯಕ್ಷೆ ಅಶ್ವಿನಿ ಮೊಳೆಯಾರು ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಯಂ, ಉಪಾಧ್ಯಕ್ಷೆ ಜಯಂತಿ ಕುಂಟಿಕಾನ, ಪೂರ್ವ ವಲಯ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ, ಪಕ್ಷದ ಮುಖಂಡರಾದ ಗಣಪತಿ ಪ್ರಸಾದ್ ಕುಳಮರ್ವ, ಬಾಲಸುಬ್ರಹ್ಮಣ್ಯ ಭಟ್, ಬಾಲಕೃಷ್ಣ ಮಲ್ಲಡ್ಕ, ಸುಂದರ ಕಟ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಬಾಲ್ಯದಲ್ಲಿಯೇ ಕಲಿಯುವಿಕೆಯಲ್ಲಿ ಮುಂದೆ ಇದ್ದ ಡಾ.ದಿವ್ಯಶ್ರೀ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಂಡಿತ್ತಡ್ಕ ಎಸ್.ಎಂ.ಎಂ.ಎ.ಯು.ಪಿ.ಶಾಲೆಯಲ್ಲಿ ಪಡೆದಿದ್ದರು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ, ಪುತ್ತೂರಿನ ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ಪಿ.ಯು.ಸಿ., ಹಾಸನದ ಎಚ್.ಐ.ಎಂ.ಎಸ್.ನಲ್ಲಿ ಎಂ.ಬಿ.ಬಿ.ಎಸ್. ಹಾಗೂ ಧಾರವಾಡದ ಡಿಐಎಮ್ಎಚ್ಎಎನ್ಎಸ್ ಕಾಲೇಜಿನಲ್ಲಿ ಎಂ.ಡಿ. ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ.