ಹೊಸದಿಗಂತ ವರದಿ ವಿಜಯಪುರ:
ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ಮೇಲಿನ ಆರೋಪಗಳು ಎಲ್ಲೂ ಸಾಬೀತಾಗಿಲ್ಲ ಮತ್ತು ಅವರ ಹೆಸರು ಎಲ್ಲಿಯೂ ನೇರವಾಗಿ ಕೇಳಿ ಬಂದಿಲ್ಲ. ಆದಾಗ್ಯೂ, ವಿಪಕ್ಷಗಳ ರಾಜಕೀಯದಿಂದ ಪಕ್ಷಕ್ಕೆ ಉಂಟಾಗಬಹುದಾದ ಮುಜುಗರ ತಪ್ಪಿಸಲು ಮತ್ತು ನೈತಿಕ ಹೊಣೆ ಹೊತ್ತು ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:
ರಾಜೀನಾಮೆ ಕೇಳುವುದಾದರೆ ಬಿಜೆಪಿಯವರು ಮೊದಲು ತಮ್ಮದೇ ಪಕ್ಷದ ಅನೇಕ ನಾಯಕರ ರಾಜೀನಾಮೆ ಪಡೆಯಬೇಕಾಗುತ್ತದೆ. ಅಸ್ಸಾಂ ಮತ್ತು ಬಿಹಾರ ಮುಖ್ಯಮಂತ್ರಿಗಳ ರಾಜೀನಾಮೆಯನ್ನೂ ಬಿಜೆಪಿ ತಕ್ಷಣವೇ ಪಡೆಯಲಿ ಎಂದರು.
ಬೇರೆ ಪಕ್ಷದಲ್ಲಿದ್ದಾಗ ನಾಯಕರನ್ನು ಭ್ರಷ್ಟರು ಎಂದು ಟೀಕಿಸುವ ಪ್ರಧಾನಿ ನರೇಂದ್ರ ಮೋದಿ, ಅದೇ ನಾಯಕರು ಬಿಜೆಪಿ ಸೇರಿದ ತಕ್ಷಣ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಬೇರೆ ಪಕ್ಷದಿಂದ ಬಂದ ತಕ್ಷಣ ಸರ್ಫ್, ಸಾಬೂನು ಹಚ್ಚಿ ಅವರನ್ನು ಸ್ವಚ್ಛ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.



