ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಹರ್ದೋಯ್ನಲ್ಲಿ ಬಹುನಿರೀಕ್ಷಿತ ‘ಗಂಗಾ ಎಕ್ಸ್ಪ್ರೆಸ್ವೇ’ ಅನ್ನು ಉದ್ಘಾಟಿಸಿದರು. ಈ ಬೃಹತ್ ಯೋಜನೆಯು ಮೀರತ್ ಮತ್ತು ಪ್ರಯಾಗ್ರಾಜ್ ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ ಬದಲಿಸಲಿದ್ದು, ರಾಜ್ಯದ ಆರ್ಥಿಕತೆಗೆ ಹೊಸ ವೇಗ ನೀಡಲಿದೆ ಎಂದು ಅವರು ಬಣ್ಣಿಸಿದರು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಎಕ್ಸ್ಪ್ರೆಸ್ವೇ ಗಂಗಾ ಮಾತೆಯ ಆಶೀರ್ವಾದದಂತಿದೆ. ಮೀರತ್ ಮತ್ತು ಪ್ರಯಾಗ್ರಾಜ್ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಇದು ಉತ್ತರ ಪ್ರದೇಶದ ಅಭಿವೃದ್ಧಿಯ ಜೀವನಾಡಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಕೇವಲ ಪ್ರಯಾಣ ಸುಲಭವಾಗುವುದು ಮಾತ್ರವಲ್ಲದೆ, ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳು ಹೆಚ್ಚಾಗಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಹಾರ ಮತ್ತು ಗುಜರಾತ್ ಚುನಾವಣೆಗಳಲ್ಲಿ ಬಿಜೆಪಿಯ ಪ್ರದರ್ಶನವನ್ನು ನೆನಪಿಸಿಕೊಂಡ ಪ್ರಧಾನಿ, ಮುಂಬರುವ 5 ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ದೊಡ್ಡ ಭವಿಷ್ಯ ನುಡಿದರು. “ಬಿಜೆಪಿ ಈ ಬಾರಿ ಐತಿಹಾಸಿಕ ಹ್ಯಾಟ್ರಿಕ್ ಸಾಧಿಸಲಿದೆ ಎಂಬ ದೃಢ ವಿಶ್ವಾಸ ನನಗಿದೆ. ಮೇ 4ರಂದು ಹೊರಬೀಳಲಿರುವ ಫಲಿತಾಂಶಗಳು ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಆನೆ ಬಲ ನೀಡಲಿವೆ ಮತ್ತು ದೇಶದ ಪ್ರಗತಿಯ ವೇಗವನ್ನು ಹೆಚ್ಚಿಸಲಿವೆ,” ಎಂದು ಅವರು ಘೋಷಿಸಿದರು.



