ಹೊಸದಿಗಂತ ವರದಿ,ಹುಬ್ಬಳ್ಳಿ:
ಬಿಜೆಪಿಯವರು ಬ್ರಿಟಿಷರು ಬಿಟ್ಟು ಹೋಗಿರುವ ಒಡೆದಾಳುವ ನೀತಿಯನ್ನು ಮುಂದುವರಿಸಿದ್ದಾರೆ. ಧರ್ಮ, ಜಾತಿ ಹಾಗೂ ರೈತ ಸಮೂಹವನ್ನು ಒಡೆದು ಮತ್ತೊಮ್ಮೆ ಅಧಿಕಾರ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಹಿಂದೂಳಿದ ವರ್ಗದ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಹಣದಲ್ಲಿ ಜಾತಿವಾರು ಸಮಾವೇಶ ಮಾಡಿ ಜನರಿಗೆ ಬಿರಿಯಾನಿ ಹಂಚುತ್ತಿದ್ದಾರೆ. ಧರ್ಮದ ಹೆಸರಲ್ಲಿ ಅಧಿಕಾರ ಹಿಡಿದು ಕಮಿಷನ್ ಪಡೆಯುವುದು ಬಿಜೆಪಿ ಕೆಲಸವಾಗಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಕಣ್ಣೀರು ಒರೆಸುತ್ತೇವೆಂದು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟು ತದನಂತರ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿದ್ದಾರೆ. ಯುವಕರಿಗೆ ಉದ್ಯೋಗ ನೀಡುತ್ತಿಲ್ಲ. ರೈತರಿಗೆ ಒಂದು ಉತ್ತಮ ಯೋಜನೆ ಜಾರಿಗೆ ತಂದಿಲ್ಲ. ಕಲ್ಯಾಣ ಕರ್ನಾಟಕಕ್ಕೆ ೩೭೧ ಕಲಂ ನೀಡಿರುವ ಉದ್ದೇಶ ಆಭಾಗದಲ್ಲಿ ಅಭಿವೃದ್ಧಿ ಕೇಂದ್ರದಿಂದ ಅನುದಾನ ತರುವುದಾಗಿದೆ. ಆದರೆ ಡಬಲ್ ಎಂಜಿನ್ ಸರ್ಕಾರವಿದ್ದರು ಏನು ಮಾಡಲಾಗುತ್ತಿಲ್ಲ ಎಂದು ತಿಳಿಸಿದರು.
ಸದ್ಯ ಕಾಂಗ್ರೆಸ್ನಲ್ಲಿ ಪ್ರಮುಖ ಪ್ರಣಾಳಿಕೆ ಹಾಗೂ ಸ್ಥಳಿಯ ಪ್ರಣಾಳಿಕೆ ತಯಾರಿಸಲಾಗುತ್ತಿದೆ. ಈ ಮೂಕಲ ಮಳೆನಾಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಆದ್ಯತೆ ನೀಡಲಾಗುತ್ತದೆ. ಕಾಂಗ್ರೆಸ್ ಅಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕಕ್ಕೆ ೧ ಲಕ್ಷ ಉದ್ಯೋಗ ನೀಡುತ್ತೇವೆ ಎಂದರು.
ಕಾಂಗ್ರೆಸ್ ಚಿದ್ರವಾಗಿದೆ ಎಂಬ ಭ್ರಮೆಯಲ್ಲಿ ಬಿಜೆಪಿ ಅವರು ಇದ್ದಾರೆ. ಬಿಜೆಪಿ ಚಿದ್ರವಾಗುತ್ತಿರುವುದು ಅರಿಯುತ್ತಿಲ್ಲ. ಚುನಾವಣೆ ಬಂದಾಗ ಸಮಾವೇಶ ಮಾಡುತ್ತಿಲ್ಲ. ಪಕ್ಷ ಸಂಘಟನೆಗೆ ಚುನಾವಣೆ ಅವಶ್ಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ವಿಶೇಷವಾಗಿ ಹಿಂದೂಳಿದ ಜನರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸುತ್ತದೆ. ಅದೇ ಬಿಜೆಪಿ ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದು, ಬದಲಾವಣೆ ಬಯಸಿದ್ದಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂದರು.
ಕಾಂಗ್ರೆಸ್ ಮುಖಂಡರಾದ ಎನ್.ಎಚ್. ಕೊನರಡ್ಡಿ, ಶಾಸಕಿ ಕುಸಮಾವತಿ ಶಿವಳ್ಳಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು, ಎಮ್.ಎಸ್.ಅಕ್ಕಿ, ಬಸವರಾಜ ಗುರಿಕಾರ ಇದ್ದರು.