ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿಯ ಪ್ರಣಾಳಿಕೆ ನಾಳೆ ಬಿಡುಗಡೆಯಾಗಲಿದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ (Congress) ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಸಾಲುಸಾಲು ಉಚಿತ ಘೋಷಣೆಗಳನ್ನು ಮಾಡಿದೆ. ಇತ್ತ ಪಂಚರತ್ನ ಹೆಸರಿನಲ್ಲಿ ಜೆಡಿಎಸ್ (JDS) ರಾಜ್ಯ ಪ್ರವಾಸ ನಡೆಸುತ್ತಿದೆ.
ಇದೀಗ ನಾಳೆ ಬಿಜೆಪಿ, ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ (BJP Manifesto) ಮಾಡುತ್ತಿದೆ. ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈ ಕುರಿತು ಮಾತನಾಡಿ, ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ ಬಸ್ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ. ನಾಳೆ ಈ ತೀರ್ಮಾನ ಪ್ರಕಟಿಸುತ್ತೇವೆ ಎಂದರು.
ಜೊತೆಗೆ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹಕ್ಕೆ ವಿಶೇಷ ಕೊಡುಗೆ ನೀಡಲು ಬಿಜೆಪಿ ಸಜ್ಜಾಗಿದೆ. ಪಿಯುಸಿ ಪಾಸ್ ಆದ ವಿದ್ಯಾರ್ಥಿನಿಯರಿಗೆ ವಿಶೇಷ ಕೊಡುಗೆ ಘೋಷಿಸುವ ಸಾಧ್ಯತೆ ಇದೆ.