ಹೊಸದಿಗಂತ ವರದಿ ತುಮಕೂರು:
ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಬಿಜೆಪಿ ವತಿಯಿಂದ ತುಮಕೂರು ನಗರದ ಹೊರವಲಯದ ಹೆಗ್ಗೆರೆಯಲ್ಲಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಪರಮೇಶ್ವರ ಅವರ ಮನೆಯ ಸುತ್ತಲೂ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಬಿಜೆಪಿ ಕಾರ್ಯಕರ್ತರನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಆದರೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತಲೆಮರೆಸಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ, ಅವರ ಕೆಲ ಕಾರ್ಯಕರ್ತರೊಂದಿಗೆ ಪ್ರಯತ್ನಿಸಿದರು. ತಲೆಗೆ ಕೇಸರಿ ಟವಲ್ ಸುತ್ತಿಕೊಂಡು, ಕೈಯಲ್ಲಿ ಸಗಣಿ ಹಿಡಿದುಕೊಂಡು ಬಂದಿದ್ದ ಶಾಸಕ ಸುರೇಶ್ ಗೌಡ ಅವರನ್ನು ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡರು.