ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜನತಾ ಪಕ್ಷ (ಬಿಜೆಪಿ) ರೈತರನ್ನು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಸಾರಲು, ದೇಶಾದ್ಯಂತ ಮೆಗಾ ಡ್ರೈವ್ ಪ್ರಾರಂಭಿಸಲು ಸಜ್ಜಾಗಿದೆ. ಬಿಜೆಪಿ ಕಿಸಾನ್ ಮೋರ್ಚಾ ಮುಖ್ಯಸ್ಥ ರಾಜ್ಕುಮಾರ್ ಚಹಾರ್ ಏಪ್ರಿಲ್ 28 ರಂದು ಬಿಹಾರದಿಂದ ಜನ ಅಭಿಯಾನ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಬಿಹಾರದ ಪಾಟ್ನಾ ಜಿಲ್ಲೆಯ ಭಕ್ತಿಯಾರ್ಪುರದಿಂದ ಸುಮಾರು 2000 ರೈತರೊಂದಿಗೆ 5 ಕಿಮೀ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.
ಈ ಜನಜಾಗೃತಿ ಅಭಿಯಾನ ಯಾತ್ರೆಯು ಮೊದಲ ಹಂತದಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ ಮತ್ತು ಜಾರ್ಖಂಡ್ನ ಗಂಗಾ ನದಿಯ ದಡದ ಹಳ್ಳಿಗಳ ಮೂಲಕ ಸಾಗಲಿದೆ ಎಂದು ಚಹರ್ ತಿಳಿಸಿದ್ದಾರೆ. ಬಿಜೆಪಿ ಕಿಸಾನ್ ಮೋರ್ಚಾವು ಸಾವಯವ ಕೃಷಿಯ ಪ್ರಯೋಜನಗಳು ಮತ್ತು ಅದನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಲು ಕಿಸಾನ್ ಸಮ್ಮೇಳನಗಳು ಮತ್ತು ಕಿಸಾನ್ ಸಭೆಗಳನ್ನು ಸಹ ಆಯೋಜಿಸುತ್ತದೆ. ನಾವು ರೈತರೊಂದಿಗೆ ಸಂಪರ್ಕ ಸಾಧಿಸುತ್ತೇವೆ ಮತ್ತು ಸಾವಯವ ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತೇವೆ. ಸರ್ಕಾರವು ರೈತರಿಗೆ ನೀಡುತ್ತಿರುವ ಬೆಂಬಲ ಮತ್ತು ದೀರ್ಘಾವಧಿಯಲ್ಲಿ ಹೇಗೆ ಲಾಭವನ್ನು ಪಡೆಯಬಹುದು ಎಂಬುದರ ಕುರಿತು ರೈತರಿಗೆ ತಿಳಿಸುತ್ತೇವೆ ಎಂದು ಚಹರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
2015-16ನೇ ಹಣಕಾಸು ವರ್ಷದಿಂದ 2019-2020ರವರೆಗೆ ಕೇಂದ್ರ ಸರ್ಕಾರವು ಸಾವಯವ ಕೃಷಿಯನ್ನು ಕೈಗೊಳ್ಳಲು ರೈತರನ್ನು ಉತ್ತೇಜಿಸಲು 1,632 ಕೋಟಿ ರೂಪಾಯಿಗಳನ್ನು ನೀಡಿದೆ. ಸರ್ಕಾರದ ಬೆಂಬಲದ ಮೂಲಕ ಪ್ರತಿ ಹೆಕ್ಟೇರ್ಗೆ ಸುಮಾರು 50,000 ರೂ.ಗಳನ್ನು ಸಾವಯವ ಕೃಷಿಗಾಗಿ ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತಿದೆ ಎಂದದ್ದಾರೆ.
ಸಣ್ಣ ರೈತರು ಸಾವಯವ ಅಥವಾ ನೈಸರ್ಗಿಕ ಕೃಷಿಗೆ ಹಿಂತಿರುಗುವಂತೆ ಒತ್ತಾಯಿಸಿದರು. ಕ್ರಿಮಿನಾಶಕಗಳು ಮತ್ತು ರಾಸಾಯನಿಕಗಳ ಕೀಟನಾಶಕಗಳನ್ನು ಬಳಸುವುದರಿಂದ ಉಂಟಾಗುವ ಅಪಾಯಗಳನ್ನು ಒತ್ತಿ ಹೇಳಿದ್ದಾರೆ, ಇದು ಇನ್ಪುಟ್ ವೆಚ್ಚದಲ್ಲಿ ಹೆಚ್ಚಳ ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕೃಷಿ ವಲಯದಲ್ಲಿ ಕೇಂದ್ರ ಬಜೆಟ್ 2022 ರ ಸಕಾರಾತ್ಮಕ ಪರಿಣಾಮದ ಕುರಿತು ವೆಬ್ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು “ನಾವು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ, ಇದರಿಂದಾಗಿ ಸಾವಯವ ಉತ್ಪನ್ನಗಳ ಮಾರುಕಟ್ಟೆಯು 11,000 ಕೋಟಿ ರೂ.ಗೆ ತಲುಪಿದೆ. ಸಾವಯವ ರಫ್ತು ಹೆಚ್ಚಾಗಿದೆ. ಆರು ವರ್ಷಗಳ ಹಿಂದೆ 2,000 ಕೋಟಿ ರೂಪಾಯಿಗಳಿಂದ 7,000 ಕೋಟಿ ರೂಗೆ ಏರಿಕೆಯಾಗಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದರು.