ಹೊಸದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಸಮಾರಂಭದ ವೇಳೆ ಬಿಜೆಪಿ ಅವರು ಪ್ರತಿಭಟನೆ ಮಾಡಿ ಮೊಟಕು ಗೊಳಿಸಲು ಮುಂದಾದರು. ಮುಂದೆ ಏನಾದರೂ ಇದೇ ರೀತಿ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಅವರಿಗೆ ಯಾವುದೇ ಕಾರ್ಯಕ್ರಮ ಮಾಡಲು ಬಿಡಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಚ್ಚರಿಕೆ ನೀಡಿದರು.
ಗುರುವಾರ ಇಲ್ಲಿನ ಕಾರವಾರ ರಸ್ತೆಯ ಗಿರಣಿಚಾಳ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ‘ಸಂವಿಧಾನ ಬಚಾವೋ ಅಭಿಯಾನ’ದ ಹೆಸರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಬಂಗಾರದ ಮಾಂಗಲ್ಯ ತೆಗೆದುಕೊಳ್ಳದ ಪರಿಸ್ಥಿತಿ ದೇಶದಲ್ಲಿ ಇದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಂಗಾರ ಕೇವಲ ೨೪ ಸಾವಿರ ಇತ್ತು. ಈಗ ೧ ಲಕ್ಷವಾಗಿದೆ. ಅರಿಶಿನ ಮಾಂಗಲ್ಯ ಹಾಕಿಕೊಳ್ಳುವ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಮಾಡಿದೆ. ಡೀಸೆಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಗಿದೆ ಎಂದರು.
ಬಿಜೆಪಿ ರಾಜ್ಯದಲ್ಲಿ ಜನಾಕ್ರೋಶ ಆರಂಭಿಸಿದ ದಿನವೇ ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಏರಿಸಿದ್ದಾರೆ. ಬಿಜೆಪಿ ಅವರು ನಮ್ಮ ವಿರುದ್ಧ ಜನಾಕ್ರೋಶ ಬಿಟ್ಟು ತಮ್ಮ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ ಎಂದು ಕಿಡಿಕಾರಿದರು.