ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರಲ್ಲ: ಅನುಮಾನ, ಗೊಂದಲಗಳಿಗೆ ಖುದ್ದು ತೆರೆ ಎಳೆದ ಡಿವಿಎಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಗೀಡಾಗುತ್ತಿರುವ ಅನುಮಾನ, ಗೊಂದಲಗಳಿಗೆ ಸಂಸದ ಡಿ.ವಿ. ಸದಾನಂದ ಗೌಡ ತೆರೆ ಎಳೆದಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಆದರೆ ಬಿಜೆಪಿಯನ್ನು ಶುದ್ಧೀಕರಣ ಮಾಡುತ್ತೇನೆ ಎಂದಿದ್ದಾರೆ.

ಎನ್‌ಡಿಎಗೆ ಜೆಡಿಎಸ್ ಸೇರ್ಪಡೆ ಆಗಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಪಕ್ಷಕ್ಕೆ ಜೀವ ತೇಯ್ದವರನ್ನು ಕಡೆಗಣಿಸಬಾರದು ಎಂದು ಪರೋಕ್ಷವಾಗಿ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ನಾನೊಬ್ಬ ಕನ್ನಡಿಗನಾಗಿ ಮಾತಾಡುತ್ತಿದ್ದೇನೆ. ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಮೋದಿ ಪರ ವಾತಾವರಣ ಸೃಷ್ಟಿಯಾಗಬೇಕು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಇದಕ್ಕಾಗಿ ಬಿಜೆಪಿ ಜನಪರವಾದ ಪಕ್ಷ ಆಗಬೇಕು, ಜನ ಒಪ್ಪಿಕೊಳ್ಳಬಲ್ಲ ಪಕ್ಷ ಆಗಬೇಕು ಎಂದ ಅವರು, ಮೋದಿ ಅವರು ಹೇಳಿದಂತೆ ಪರಿವಾರವಾದ, ಭ್ರಷ್ಟಾಚಾರವಾದ, ಜಾತಿವಾದ ಕರ್ನಾಟಕದಲ್ಲಿ ಇರಬಾರದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!