ದಿಗಂತ ವರದಿ ವಿಜಯಪುರ:
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಬೆಳಗ್ಗೆ ಕುಟುಂಬ ಸಮೇತ ನಗರದ ಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಕೊಠಡಿ ನಂ.5 ರ ಎದುರು ಸರತಿ ಸಾಲಿನಲ್ಲಿ ನಿಂತು ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ಅವರೊಂದಿಗೆ ಮತ ಚಲಾಯಿಸಿದರು.
ದೇಶದ ಸುರಕ್ಷತೆ, ಸನಾತನ ಧರ್ಮ ಉಳಿಸಲು ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಆದಷ್ಟು ಬೇಗ, ತಪ್ಪದೆ ಮತ ಕೇಂದ್ರಕ್ಕೆ ತೆರಳಿ, ಮತಚಲಾವಣೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಕೈ ಜೋಡಿಸಬೇಕು ಎಂದು ವಿನಂತಿಸಿದರು.
ರಾಜ್ಯದ ಎರಡನೇ ಹಂತದ ಚುನಾವಣೆಯ ಎಲ್ಲಾ 14 ಕ್ಷೇತ್ರಗಳಲ್ಲಿಯೂ ಉತ್ತಮ ವಾತಾವರಣವಿದೆ. ಬಿಜೆಪಿ ಗೆಲುವು ನಿಶ್ಚಿತ. ಮತದಾನ ಪ್ರಮಾಣ ಹೆಚ್ಚಾದಂತೆ ನಮ್ಮ ಗೆಲುವಿನ ಅಂತರ ಹೆಚ್ಚುತ್ತದೆ. ವಿಜಯಪುರ ನಗರದಲ್ಲಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ನೋಡಿ ಖುಷಿ ಆಯ್ತು ಎಂದರು. ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.