ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋಸದ ಮೂಲಕ ಗೆಲುವು ಸಾಧಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಗುಜರಾತ್ನ ಅಹಮದಾಬಾದ್ನ ಸಾಬರಮತಿ ನದಿ ತೀರದಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ. ನಾವು ಎಲ್ಲೆಡೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ರಾಹುಲ್ ಗಾಂಧಿ ಈ ಬಗ್ಗೆ ತೀವ್ರವಾಗಿ ಧ್ವನಿ ಎತ್ತಿದ್ದಾರೆ. ಒಟ್ಟಾರೆಯಾಗಿ ಮಹಾರಾಷ್ಟ್ರ ಚುನಾವಣೆ ಒಂದು ಮೋಸವಾಗಿತ್ತು ಎಂದರು.
ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಹರಿಯಾಣದಲ್ಲೂ ಇದೇ ರೀತಿಯಾಗಿ ನಡೆದಿಡ್ಡಿ, ಇಲ್ಲಿಯೂ ಪ್ರಜಾಪ್ರಭುತ್ವವನ್ನು ನಾಶಪಡಿಸುವ ಉದ್ದೇಶದಿಂದ ಮಾಡಲಾಗಿದೆ. ನಾವು ಇದನ್ನು ಕಂಡುಹಿಡಿಯುತ್ತೇವೆ. ಕಳ್ಳ ಒಂದು ದಿನ ಸಿಕ್ಕಿಬೀಳುತ್ತಾನೆ. ನಮ್ಮ ವಕೀಲರು ಮತ್ತು ನಾಯಕರು ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವಿಶ್ವದಲ್ಲಿ ಅನೇಕ ದೇಶಗಳು ಇವಿಎಂಗಳಿಂದ ಮತ ಪತ್ರಗಳತ್ತ ಮರಳುತ್ತಿವೆ. ಆದರೆ ನಾವು ಇನ್ನೂ ಇವಿಎಂಗಳನ್ನೇ ಬಳಸುತ್ತಿದ್ದೇವೆ. ಇದು ಸಂಪೂರ್ಣ ಮೋಸ. ಅವರು ನಮ್ಮನ್ನು ಸಾಬೀತುಪಡಿಸುವಂತೆ ಕೇಳುತ್ತಾರೆ. ಆದರೆ ಅವರು ರೂಪಿಸಿರುವ ತಂತ್ರಗಳು ಆಡಳಿತ ಪಕ್ಷಕ್ಕೆ ಲಾಭವನ್ನು ತಂದುಕೊಡುತ್ತವೆ ಮತ್ತು ಪ್ರತಿಪಕ್ಷಕ್ಕೆ ಅನಾನುಕೂಲ ಮಾಡುತ್ತವೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.