ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ ಅವರ ಮೇಲೆ ರಾಡ್ನಲ್ಲಿ ಹಲ್ಲೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ‘
ಈಗಾಗಲೇ ನಟ ಸಲ್ಮಾನ್ ಖಾನ್ ಗೆ ಹಲವಾರು ಬಾರಿ ಕೊಲೆ ಬೆದರಿಕೆ ಬರುತ್ತಲೇ ಇದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಇದರ ಬೆನ್ನಲ್ಲೇ ಇದೀಗ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು.
ಇದೀಗ ಪ್ರೊಡಕ್ಷನ್ ಹೌಸ್ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ ಅವರ ಮೇಲೆ ರಾಡ್ನಲ್ಲಿ ಹಲ್ಲೆ ನಡೆದಿದ್ದು,ಸಲ್ಲು ಭಾಯಿ ಫ್ಯಾನ್ಸ್ ಸಕತ್ ಆತಂಕಕ್ಕೆ ಒಳಗಾಗಿದ್ದಾರೆ.
ಆದರೆ ಸಲ್ಮಾನ್ ಖಾನ್ ಕೊಲೆ ಬೆದರಿಕೆಗೂ, ಈ ಹಲ್ಲೆಗೂ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಸಾಲದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಪಾಲೇಶ್ವರ್ ಚೌಹಾಣ್ ಬಾರ್ ಮ್ಯಾನೇಜರ್ ಸತೀಶ್ ಎನ್ನುವವರಿಗೆ ಸಾಲ ನೀಡಿದ್ದರು. ಅವರು ಪಾಲೇಶ್ವರ್ಗೆ ಅರ್ಧ ಹಣವನ್ನು ಹಿಂದಿರುಗಿಸಿದ್ದರು. ಉಳಿದ ಹಣವನ್ನು ಹಿಂದಿರಿಗಿಸಿ ಎಂದು ಕೇಳಲು ಪಾಲೇಶ್ವರ್ ಬಾರ್ಗೆ ತೆರಳಿದರು. ಆದರೆ ಮಧ್ಯರಾತ್ರಿಯವರೆಗೆ ಕಾದರೂ ಅವರು ಬರಲಿಲ್ಲ. ಮಧ್ಯರಾತ್ರಿ 1 ಗಂಟೆಗೆ ಸತೀಶ್ ಆಗಮಿಸಿದರು. ‘ಇದು ಬಾರ್ ಮುಚ್ಚುವ ಸಮಯ. ನಾಳೆ ಮಾತನಾಡೋಣ’ ಎಂದು ಹೇಳಿ ಹೊರಟೇ ಬಿಟ್ಟರು ಸತೀಶ್. ಇದು ಪಾಲೇಶ್ವರ್ ಕೋಪಕ್ಕೆ ಕಾರಣವಾಯಿತು. ಅವರು ಬಾರ್ ಹೊರಗೆ ಸತೀಶ್ನ ಪ್ರಶ್ನೆ ಮಾಡಿದರು. ಈ ವೇಳೆ ಪಾಲೇಶ್ವರ್ ಮೇಲೆ ಸತೀಶ್ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ. ಪಾಲೇಶ್ವರ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಪಾಲೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.