ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಈ ನಡುವೆಯೇ ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಮಿ ಕೆಲವು ಪಾಕಿಸ್ತಾನಿ ಯುವಕರೊಂದಿಗೆ ನಡೆಸಿರುವ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.
ಅದ್ನಾನ್ ಸಮಿ ಇತ್ತೀಚೆಗೆ ಅಜೆರ್ಬೈಜಾನ್ನಲ್ಲಿ ಕೆಲವು ಪಾಕಿಸ್ತಾನಿ ಹುಡುಗರೊಂದಿಗೆ ನಡೆಸಿರುವ ಸಂಭಾಷಣೆ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ತಾವು ಒಳ್ಳೆಯ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದಿದ್ದೇನೆ ಎಂದು ಹೇಳಿದ್ದಾರೆ.
ಒಳ್ಳೆಯ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದಿದ್ದೇನೆ. ಅಲ್ಲಿನ ಕೆಲವರು ತಮ್ಮ ಪಾಕಿಸ್ತಾನಿ ಗುರುತುಗಳನ್ನು ತ್ಯಜಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಒಂದು ಕಾಲದಲ್ಲಿ ಪಾಕಿಸ್ತಾನಿ ಪಾಸ್ಪೋರ್ಟ್ ಹೊಂದಿದ್ದ ಮತ್ತು ಈಗ ಭಾರತೀಯ ಪ್ರಜೆಯಾಗಿರುವ ಸಮಿಯ ಬಳಿ ಪಾಕಿಸ್ತಾನದ ಹುಡುಗರು ತಾವು ಪಾಕಿಸ್ತಾನ ಸೈನ್ಯವನ್ನು ದ್ವೇಷಿಸುವುದಾಗಿ ಹೇಳಿದರು. ಯಾಕೆಂದರೆ ಅದು ಅವರ ದೇಶವನ್ನು ನಾಶಮಾಡಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
2016ರಲ್ಲಿ ಭಾರತೀಯ ಪೌರತ್ವ ಪಡೆದ ಸಮಿ, ಎಕ್ಸ್ ನಲ್ಲಿ ಈ ಕುರಿತು ಹೇಳಿದ್ದು, ಅಜೆರ್ಬೈಜಾನ್ನ ಬಾಕುವಿನ ಸುಂದರ ಬೀದಿಗಳಲ್ಲಿ ನಡೆಯುವಾಗ ಕೆಲವು ಪಾಕಿಸ್ತಾನಿ ಹುಡುಗರನ್ನು ಭೇಟಿಯಾದೆ. ಅವರು ಸರ್, ನೀವು ತುಂಬಾ ಅದೃಷ್ಟವಂತರು..ನೀವು ಸರಿಯಾದ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದಿದ್ದೀರಿ. ನಾವು ನಮ್ಮ ಪೌರತ್ವವನ್ನು ಬದಲಾಯಿಸಲು ಬಯಸುತ್ತೇವೆ. ನಾವು ನಮ್ಮ ಸೈನ್ಯವನ್ನು ದ್ವೇಷಿಸುತ್ತೇವೆ. ಅವರು ನಮ್ಮ ದೇಶವನ್ನು ನಾಶಪಡಿಸಿದ್ದಾರೆ ಎಂದು ಹೇಳಿದರು. ಇದು ನನಗೆ ಬಹಳ ಹಿಂದೆಯೇ ತಿಳಿದಿತ್ತು ಎಂದು ತಿಳಿಸಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಸಮಿ, ನಾನು ಭಾರತದಲ್ಲಿ ತುಂಬಾ ಸಂತೋಷವಾಗಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾದರೆ ನಿಮ್ಮ ಮುಂದಿನ ಗಮ್ಯಸ್ಥಾನ ಯಾವುದು? ಎಂದು ಪಾಕಿಸ್ತಾನಿ ಪ್ರಜೆಯೊಬ್ಬರು ಎಕ್ಸ್ ನಲ್ಲಿ ಕೇಳಿದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದರು. ಬಾಲಿವುಡ್ ನ ಹಲವಾರು ಚಲನಚಿತ್ರಗಳಿಗೆ ಹಿಟ್ ಹಾಡುಗಳನ್ನು ನೀಡಿರುವ ಸಮಿಗೆ 2021 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
2001ರಲ್ಲಿ ಪಾಕಿಸ್ತಾನಿ ಪಾಸ್ಪೋರ್ಟ್ನೊಂದಿಗೆ ಭಾರತಕ್ಕೆ ಬಂದ ಸಮಿ 15 ವರ್ಷಗಳ ಕಾಲ ಇಲ್ಲೇ ವಾಸವಾಗಿದ್ದರು. ಬಳಿಕ ಅಂತಿಮವಾಗಿ 2016ರಲ್ಲಿ ಭಾರತೀಯ ಪೌರತ್ವವನ್ನು ಪಡೆದರು. 2013ರಲ್ಲಿ ಅವರ ಪಾಕಿಸ್ತಾನಿ ಪಾಸ್ಪೋರ್ಟ್ ಅವಧಿ ಮುಗಿದ ಬಳಿಕ ಅವರು ಭಾರತೀಯ ಪೌರತ್ವವನ್ನು ಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.