ಹೊಸದಿಗಂತ ವರದಿ ಮಡಿಕೇರಿ:
ಮಾ.11ರಂದು ಉದ್ಘಾಟನೆಗೊಳ್ಳಲಿರುವ ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಹೈವೆ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್. 275)ಗೆ ಕಾವೇರಿ ಎಕ್ಸ್ಪ್ರೆಸ್ ಹೈವೆ ಎಂದು ಹೆಸರಿಡುವಂತೆ ಶಾಸಕ ಕೆ.ಜಿ.ಬೋಪಯ್ಯ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು, ಮೈಸೂರು, ಮಡಿಕೇರಿಗೆ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿದೆ. ಈಗಾಗಲೇ ಮೈಸೂರು, ಬೆಂಗಳೂರು ತಲುಪುವ ಮಾರ್ಗದ ಕಾಮಗಾರಿ ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಕಾವೇರಿ ನದಿಯು ಕೊಡಗಿನಲ್ಲಿ ಹುಟ್ಟಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಿಗೆ ಮಾತ್ರವಲ್ಲದೆ ತಮಿಳುನಾಡಿಗೂ ನೀರಿನ ಸೌಲಭ್ಯವನ್ನು ಒದಗಿಸುತ್ತದೆ. ಅದೂ ಅಲ್ಲದೆ ಕೊಡಗು ಸೇರಿದಂತೆ ಈ ಭಾಗದ ಎಲ್ಲಾ ಜನರಿಗೆ ಕಾವೇರಿ ನದಿಯು ಕಾವೇರಿ ಮಾತೆ ಎಂಬ ಪೂಜ್ಯ ಭಾವನೆ ಇದೆ. ಹಾಗಾಗಿ ಜನರ ಪೂಜ್ಯ ಭಾವನೆ ಗುರುತಿಸಲು ಹಾಗೂ ಕನ್ನಡ ನಾಡಿಗೆ ಅನ್ನದಾತೆಯಾಗಿರುವ ಕೊಡಗಿನ ಕಾವೇರಿ ಮಾತೆಯ ಹೆಸರು ಶಾಶ್ವತವಾಗಿ ಇರುವಂತೆ ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಹೈವೆಗೆ ಕಾವೇರಿ ಎಕ್ಸ್ಪ್ರೆಸ್ ಹೈವೆ ಎಂದು ಹೆಸರಿಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮುಖ್ಯಮಂತ್ರಿಯವರನ್ನು ಬೋಪಯ್ಯ ಕೋರಿದ್ದಾರೆ.