ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಲ್ಡೀವ್ಸ್ (Maldives) ಸಚಿವರು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದನ್ನು ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಎಲ್ಲೆಡೆ ಬೈಕಾಟ್ ಮಾಲ್ಡೀವ್ಸ್ ಟ್ರೆಂಡ್ ಶುರು ಆಗುವುದರ ಜೊತೆಗೆ ಇತ್ತ ವೆಲ್ಕಮ್ ಟು ಲಕ್ಷದ್ವೀಪ್ ಹ್ಯಾಷ್ಟ್ಯಾಗ್ ಕೂಡ ಶುರುವಾಗಿದೆ.
ಭಾರತದಲ್ಲಿನ ಸುಂದರ ಬೀಚ್ಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ವಿರೇಂದ್ರ ಸೆಹ್ವಾಗ್ ಅವರು ಉಡುಪಿ (Udupi) ಮುಂತಾದ ಬೀಚ್ಗಳ ಸೌಂದರ್ಯವನ್ನು ಕೊಂಡಾಡಿದ್ದಾರೆ. ಅದಕ್ಕೆ ಅಮಿತಾಭ್ ಬಚ್ಚನ್ (Amitabh Bachchan) ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿ, ಪಾಂಡಿಚೆರಿ, ಅಂಡಮಾನ್ ಮುಂತಾದ ಬೀಚ್ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ರಿಪ್ಲೈ ಮಾಡಿರುವ ಅಮಿತಾಭ್ ಬಚ್ಚನ್, ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್ವಾಟರ್ ಅನುಭವ ತುಂಬ ಚೆನ್ನಾಗಿದೆ ಎಂದಿದ್ದಾರೆ.
ಈ ಟ್ವೀಟ್ ವೈರಲ್ ಆಗುತ್ತಲೇ ಸೋಷಿಯಲ್ ಮೀಡಿಯಾಗಳಲ್ಲಿ ಉಡುಪಿಯ ಬಗ್ಗೆಯೂ ಹುಡುಕಾಟ ಜೋರಾಗಿದೆ. ಉಡುಪಿಯ ಬಗ್ಗೆ ಅರಿವಿಲ್ಲದ ಹೊರ ರಾಜ್ಯಗಳವರು ಇಲ್ಲಿಯ ಬೀಚ್ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ.
ಅದೇ ಇನ್ನೊಂದೆಡೆ, ಅಕ್ಷಯ್ ಕುಮಾರ್ ಕಂಗನಾ ರಣಾವತ್, ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಲಕ್ಷದ್ವೀಪಕ್ಕೆ ವೆಲ್ಕಮ್ ಟ್ರೆಂಡ್ ಶುರು ಮಾಡಿದ್ದಾರೆ.