ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಮಹಾಕಾಳಿ ಮಠ(ಮಂಗಲ್ದಿಮಠ) ಮತ್ತು ವರ್ತೆ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಫೆ.18ರಿಂದ ಫೆ.20ರವರೆಗೆ ಬ್ರಹ್ಮ ಕಲಶ ಮಹೋತ್ಸವ ಹಾಗೂ ರಂಗ ಪೂಜೆ, ವರ್ತೆ ಕಲ್ಕುಡ ದೈವದ ಸಿರಿಸಿಂಗಾರದ ನೇಮೋತ್ಸವ ಜರಗಲಿದೆ.
ವೇದಮೂರ್ತಿ ಶ್ರೀಶ ತಂತ್ರಿ, ಶ್ರೀನಿವಾಸ ತಂತ್ರಿ ಉಡುಪಿ ಪುತ್ತೂರು, ಹಾಗೂ ಅರ್ಚಕರಾದ ಗಣಪತಿ ಭಟ್ರವರ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ.
ಫೆ.18ರಂದು ಸಂಜೆ 4ರಿಂದ ಪಳ್ಳಿ ಶ್ರೀ ಗಣೇಶ ವೇದಿಕೆಯಿಂದ ಶ್ರೀ ಕ್ಷೇತ್ರದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಫೆ.19ರಂದು ಸಂಜೆ ವಾಸ್ತು ರಕ್ಷಾ ಹೋಮ, ಬಲಿ ಪೂಜೆ ನಡೆಯಲಿದೆ. ರಾತ್ರಿ ೮ರಿಂದ ಶ್ರೀ ಮಹಾಕಾಳಿ ಭಜನಾ ಮಂಡಳಿ ಇವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನಾ ಸಂಕೀರ್ತನೆ ನಡೆಯಲಿದೆ.
ಫೆ.20ರಂದು ಬೆಳಗ್ಗೆ 9.50 ಕ್ಕೆ ಶ್ರೀ ಮಹಾಕಾಳಿ ಮತ್ತು ಶ್ರೀ ವರ್ತೆ ಕಲ್ಕುಡ ಪರಿವಾರ ದೈವಗಳ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಬಳಿಕ ಮಹಾ ಅನ್ನ ಸಂತರ್ಪಣೆ, ಸಂಜೆ 7 ರಿಂದ ಭಜನಾ ಕಾರ್ಯಕ್ರಮ, 8 ಗಂಟೆಯಿಂದ ರಂಗಪೂಜೆ, ಕಲ್ಕುಡ ದೈವಸ್ಥಾನದಲ್ಲಿ ಮಹಾಪೂಜೆ, ರಾತ್ರಿ 9 ಕ್ಕೆ ದೈವಗಳಿಗೆ ನೇಮೋತ್ಸವ ನೆರವೇರಲಿದೆ.
ಫೆ.20ರಂದು ಪೂರ್ವಾಹ್ನ 11 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೇಮಾರು ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ ಅನುಗ್ರಹ ಸಂದೇಶ ನೀಡುವರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಮುಖ್ಯ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಾಬುರಾಜೇಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಚಿತ್ರನಟ ಶಿವಧ್ವಜ್, ಪಳ್ಳಿ ಗ್ರಾ.ಪಂ. ಅಧ್ಯಕ್ಷ ಸಂದೀಪ್ ಅಮೀನ್ ಅತಿಥಿಗಳಾಗಿರುವರು. ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೋಜರಾಜ ಹೆಗ್ಡೆ, ಪಿ.ರಮಾನಾಥ ಹೆಗ್ಡೆ, ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಂಗೀತಾ ನಾಯಕ್, ಉದ್ಯಮಿ ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.