ಹೊಸ ದಿಗಂತ, ಮಂಗಳೂರು:
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ನಾಲ್ಕು ಜೀವಬಲಿ ಪಡೆದಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಸೋಂಕಿನ ಕುರಿತು ಕಣ್ಗಾವಲು, ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮಾರಣಾಂತಿಕವಾದ ಈ ನೆಗ್ಗೇರಿಯಾ ಫೌಲೇರಿ ಹೆಸರಿನ ಅಪರೂಪದ ಈ ಸೋಂಕಿಗೆ ಕೇರಳದಲ್ಲಿ ಈಗಾಗಲೇ ನಾಲ್ಕು ಮಂದಿ ಬಲಿಯಾಗಿದ್ದಾರೆ, ಕಲುಷಿತ ನೀರಿನಲ್ಲಿ ಈ ವೈರಸ್ ಕಂಡುಬರುತ್ತಿದ್ದು, ಮೂಗಿನ ಮೂಲಕ ಶರೀರ ಸೇರಿ ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡಿ ಜೀವಕ್ಕೆ ಕುತ್ತು ತರುತ್ತದೆ.
ಹೀಗಾಗಿ ಮಳೆ ನೀರು ನಿಂತ ಹೊಂಡಗಳಲ್ಲಿ, ಸ್ವಿಮ್ಮಿಂಗ್ ಫೂಲ್ ನಲ್ಲಿ ಕಲುಷಿತ ನೀರಿನಲ್ಲಿ ಈಜಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜೊತೆಗೆ ಈ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಮಾಹಿತಿ ನೀಡಲು ಅಧಿಕಾರಿಗಳಿಗೆ ಇಲಾಖೆ ಸೂಚಿಸಿದೆ.