ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಸಂಘರ್ಷದ ಕುರಿತು ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆಯ ಸಂಪುಟ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, NSA ಮುಖ್ಯಸ್ಥ ಅಜಿತ್ ದೋವಲ್ ಹಾಗೂ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಹಾಜರಿದ್ದರು.
ಸಭೆಯಲ್ಲಿ ಗಡಿ ಪ್ರದೇಶಗಳಲ್ಲಿ ಹಾಗೂ ಕಡಲ ಮತ್ತು ವಾಯು ಡೊಮೇನ್ನಲ್ಲಿ ಭಾರತದ ಭದ್ರತಾ ಸನ್ನದ್ಧತೆಯ ಇತ್ತೀಚಿನ ಬೆಳವಣಿಗೆಗಳು ಮತ್ತು ವಿವಿಧ ಅಂಶಗಳನ್ನು ಪ್ರಧಾನಿ ಮೋದಿ ಅವರಿಗೆ ವಿವರಿಸಲಾಗಿದೆ.
‘ಆಪರೇಷನ್ ಗಂಗಾ’ ಬಗ್ಗೆ ಚರ್ಚೆ ನಡೆಸಲಾಯಿತು. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ಅದಕ್ಕೆ ಏನೆಲ್ಲಾ ಅಡ್ಡಿ ಆಯಿತು? ಇದೀಗ ಉಕ್ರೇನ್ ಪರಿಸ್ಥಿತಿ ಹೇಗಿದೆ? ನೆರೆಯ ರಾಷ್ಟ್ರಗಳ ಎಷ್ಟು ನಾಗರಿಕರನ್ನ ಭಾರತ ರಕ್ಷಣೆ ಮಾಡಿದೆ ಅನ್ನೋದ್ರ ಬಗ್ಗೆ ಚರ್ಚೆ ನಡೆಯಿತು.
ಕನ್ನಡಿಗ ಮೃತದೇಹ ತರಲು ಪ್ರಧಾನಿ ಸೂಚನೆ
ಉಕ್ರೇನ್ ಖಾರ್ಕಿವ್ನಲ್ಲಿ ರಷ್ಯಾ ನಡೆಸಿದ ದಾಳಿಯಿಂದ ಕನ್ನಡ ನವೀನ್ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನ ತಂದು ಕೊಡುವಂತೆ ಕುಟುಂಬ ಒತ್ತಾಯಿಸುತ್ತಿದೆ. ಇದು ಪ್ರಧಾನಿ ಮೋದಿ ಅವರ ಗಮನಕ್ಕೂ ಬಂದಿದ್ದು, ಆದಷ್ಟು ಬೇಗ ನವೀನ್ ಮೃತದೇಹ ತರುವಂತೆ ಮೋದಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.