ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಣ ಬಡಿದಾಟ ತಾರಕಕ್ಕೇರಿದ್ದು, ಈ ನಡುವಲ್ಲೇ ಬಿಜೆಪಿಯ ಕೆಳ ಹಂತದ ಕಾರ್ಯಕರ್ತರು ಬರೆದಿದ್ದಾರೆನ್ನಲಾದ ಪತ್ರವೊಂದು ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ವಿಜಯೇಂದ್ರ, ಯಡಿಯೂರಪ್ಪ ಒಪ್ಪಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯಲಾಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾವು, ಕೆಳಮಟ್ಟದ ಬಿಜೆಪಿ ಸದಸ್ಯರ ಗುಂಪೊಂದು, ಕರ್ನಾಟಕದ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿರುವ ದುಸ್ಥಿತಿಯನ್ನು ಹಂಚಿಕೊಳ್ಳಲು ಈ ಪತ್ರವನ್ನು ಬರೆಯುತ್ತೇವೆ. ಈ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗದಿದ್ದರೆ ಭವಿಷ್ಯದಲ್ಲಿ ಪಕ್ಷದ ಪತನಕ್ಕೆ ಇದು ಕಾರಣವಾಗಬಹುದು. ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ 3 ಕ್ಷೇತ್ರಗಳಲ್ಲೂ ಸೋತಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಅವರ ತಂದೆ ಬಿ ಎಸ್ ಯಡಿಯೂರಪ್ಪ ನಡೆಸುತ್ತಿರುವ “ಒಪ್ಪಂದ ರಾಜಕೀಯ”ದ ಮೇಲೆ ಬೆಳಕು ಚೆಲ್ಲಿದೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಕೈಜೋಡಿಸಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯನವರನ್ನು ತಡೆಯಲು ಸಾಕಷ್ಟು ಅವಕಾಶ ಇದ್ದರೂ, ಅವರು ಇನ್ನೂ ಅಧಿಕಾರದಲ್ಲಿದ್ದಾರೆ. ಇದು ವಿಜಯೇಂದ್ರ ಮತ್ತು ಯಡಿಯೂರಪ್ಪನವರ ರಕ್ಷಣೆಯ ಕಾರಣದಿಂದಷ್ಟೇ ಸಂಭವಿಸುತ್ತಿದೆ. ಕೆಲವು ತಿಂಗಳ ಹಿಂದೆ, ಸಿದ್ದರಾಮಯ್ಯ ಪೋಸ್ಕೋ ಪ್ರಕರಣದಲ್ಲಿ ಯಡಿಯೂರಪ್ಪನನ್ನು ರಕ್ಷಿಸಿದ್ದರು, ಅವರನ್ನು ಸಮಯಕ್ಕೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಮಾಡಿಕೊಡಲಾಯಿತು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಎಂದು ಬರೆಯಲಾಗಿದೆ.