ಹೊಸದಿಗಂತ ಡಿಜಿಟಲ್ ಡೆಸ್ಕ್ :
ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಬೌದ್ಧ ಶೃಂಗಸಭೆಯನ್ನು ಪ್ರಧಾನಿ ಮೋದಿ (Narendra Modi) ಅವರು ಇಂದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಬುದ್ಧನ ಬೋಧನೆಗಳು ಶತಮಾನಗಳಿಂದ ಅಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿವೆ. ಭಾರತ ಜಾಗತಿಕ ಅಭಿವೃದ್ಧಿಗೆ ಗೌತಮ ಬುದ್ಧ ಅವರ ತತ್ವ, ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ಹೇಳಿದರು.
ಇಂದು ಜಗತ್ತು ಯುದ್ಧ ಮತ್ತು ಅಶಾಂತಿಯಿಂದ ಬಳಲುತ್ತಿದೆ, ಶತಮಾನಗಳ ಹಿಂದೆ ಬುದ್ಧ ಇದಕ್ಕೆ ಪರಿಹಾರವನ್ನು ನೀಡಿದ್ದರು. ಭಾರತವು ಜಗತ್ತಿಗೆ ‘ಯುದ್ಧ’ವನ್ನು ನೀಡಿಲ್ಲ, ಆದರೆ ‘ಬುದ್ಧ’ ಆದರ್ಶಗಳನ್ನು ನೀಡಿದೆ ಎಂದು ಹೇಳಿದರು. ಬುದ್ಧನ ನೀಡಿದ ಹಾದಿ ಭವಿಷ್ಯದ ಮತ್ತು ಸುಸ್ಥಿರತೆಯ ಮಾರ್ಗವಾಗಿದೆ. ಮೋದಿ ಅವರು ತಮ್ಮ ಯೋಜನೆಗಳಲ್ಲಿ ಅಥವಾ ಸರ್ಕಾರಿ ಕೆಲಸಗಳಲ್ಲಿ ಭಾಗವಹಿಸುವಾಗ ಬುದ್ಧನ ಪ್ರತಿಮೆಯನ್ನೇ ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ಜನರು, ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳ ಜೊತೆಗೆ ಜಾಗತಿಕ ಹಿತಾಸಕ್ತಿಗೆ ಆದ್ಯತೆ ನೀಡುವುದು ಅಗತ್ಯವಿದೆ. ‘ಅತಿಥಿ ದೇವೋ ಭವ’ ಎಂಬ ಮಾತು ಬುದ್ಧನ ಈ ನೆಲದ ಸಂಪ್ರದಾಯ, ಅಂದರೆ ಅತಿಥಿಗಳು ನಮಗೆ ದೇವರಿದ್ದಂತೆ’ ಎಂದು ಹೇಳಿದರು.
ಇಂದು ನಾವು ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬೌದ್ಧ ಬೋಧನೆಯಿಂದ ಪರಿಹರಿಸಬಹುದು, ಬಿಕ್ಕಟ್ಟಿನಿಂದ ಪರಿಹಾರದ ಕಡೆಗೆ ಚಲಿಸುವುದು ಬುದ್ಧನ ಮಾರ್ಗವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಎರಡು ದಿನಗಳ ಈ ಶೃಂಗಸಭೆಯನ್ನು ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಏಪ್ರಿಲ್ 20 ಮತ್ತು 21 ರಂದು ಆಯೋಜಿಸಿದೆ.