ಹೊಸದಿಗಂತ ವರದಿ ಬಳ್ಳಾರಿ:
ಕೇಂದ್ರ ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅತ್ಯುತ್ತಮವಾಗಿದ್ದು, ಎಲ್ಲ ವಲಯಕ್ಕೂ ಆದ್ಯತೆ ನೀಡಲಾಗಿದೆ, ನಮ್ಮ ರೈತರಿಗೆ ಬಜೆಟ್ನಲ್ಲಿ ಭರ್ಪೂರ್ ಕೊಡುಗೆಗಳನ್ನು ನೀಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಮಂಡಿಸಿದ್ದು, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ವಲಯಕ್ಕೂ ಆದ್ಯತೆ ನೀಡಿದ್ದಾರೆ.
ಕೃಷಿಗೆ ಬಾರಿ ಆದ್ಯತೆ: ರೈತರ ಸಾಲದ ಗುರಿಯನ್ನು 20 ಲಕ್ಷ ಕೋಟಿ ಗೆ ಹೆಚ್ಚಳ, ರೈತರಿಗೆ ಡಿಜಿಟಲ್ ತರಬೇತಿ, ದುರ್ಬಲ ರೈತರಿಗೆ ಸಹಕಾರಿ ಮಾದರಿಯ ತರಬೇತಿ, ಮೀನು ಸಾಕಾಣಿಕೆಗೆ 6 ಸಾವಿರ ಕೋಟಿ, ಕೃಷಿಯಲ್ಲಿ ಧಾನ್ಯಗಳ ಬೆಳೆಗೆ ಒತ್ತು, ಕೃಷಿ ಸ್ಟಾರ್ಟಪ್ಗಳನ್ನು ಉತ್ತೇಜನ ಸೇರಿದಂತೆ ಕೃಷಿ ವಲಯಕ್ಕೆ ಕೇಂದ್ರ ಸರ್ಕಾರ ಬಂಫರ್ ಕೊಡುಗೆ ನೀಡಿದೆ.
ತೋಟಗಾರಿಕೆ ಯೋಜನೆಗಳಿಗೆ 22 ಸಾವಿರ ಕೋಟಿ, ಕೀಟನಾಶಕಗಳಿಗಾಗಿ 10 ಸಾವಿರ ಜೈವಿಕ ಇನ್ಪುಟ್ ಕೇಂದ್ರಗಳ ಸ್ಥಾಪನೆ, ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿ, ಮೂಲ, ಹಸಿರು ಬೆಳವಣಿಗೆ, ಹಣಕಾಸು ವಲಯ, ಯುವ ಶಕ್ತಿಗೆ ಬಜೆಟ್ನಲ್ಲಿ ಭಾರೀ ಆದ್ಯತೆ ನೀಡಲಾಗಿದೆ. ಮಕ್ಕಳು ಮತ್ತು ಯುವಕರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ರಾಷ್ಟ್ರೀಯ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ., ಯುವಕರ ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು, 11.4 ಕೋಟಿ ರೈತರಿಗೆ ಸಮ್ಮಾನ್ ನಿಧಿಯ ಯೋಜನೆ ಲಾಭ.
ದೇಶದ ಬೆನ್ನೆಲಬು ರೈತರಿಗಾಗಿ ಇನ್ನು ಹಲವಾರು ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ನಮ್ಮ ಡಬಲ್ ಎಂಜಿನ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.