ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಟ್ಟಾರಕರ-ದಿಂಡುಗಲ್ ರಾಷ್ಟ್ರೀಯ ಹೆದ್ದಾರಿಯ ಪುಲ್ಲುಪಾರ ಬಳಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಕೆಎಸ್ಆರ್ಟಿಸಿ ಬಜೆಟ್ ಟೂರಿಸಂ ಸೆಲ್ನ ಭಾಗವಾಗಿರುವ ಬಸ್ ತಮಿಳುನಾಡಿನ ತಂಜಾವೂರು ಪ್ರವಾಸ ಮುಗಿಸಿ ಅಲಪ್ಪುಳ ಜಿಲ್ಲೆಯ ಮಾವೆಲಿಕ್ಕಾರಕ್ಕೆ ಹಿಂತಿರುಗುತ್ತಿತ್ತು.
ಇಡುಕ್ಕಿ ಜಿಲ್ಲೆಯ ಕಲ್ಲಿವಾಯಲ್ ಎಸ್ಟೇಟ್ ಬಳಿ ಬೆಳಗ್ಗೆ 6.15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರನ್ನು ಮಾವೇಲಿಕ್ಕರ ನಿವಾಸಿಗಳಾದ ಅರುಣ್ ಹರಿ (55), ರಾಮ ಮೋಹನ್ (40), ಸಂಗೀತ್ (45), ಮತ್ತು ಬಿಂದು ಉನ್ನಿಥಾನ್ (59) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ತಿರುವಿನಲ್ಲಿ ಬಸ್ ಬ್ರೇಕ್ ಫೇಲ್ ಆಗಿತ್ತು. ಇದರಿಂದಾಗಿ ಬಸ್ಸು 70 ಅಡಿ ಆಳದ ಕಂದಕಕ್ಕೆ ಉರುಳಿತ್ತು. ಬಸ್ ಮರದಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ, ಹೆಚ್ಚಿನ ಸಾವು ನೋವುಗಳು ಸಂಭವಿಸಿಲ್ಲ.
ಸ್ಥಳೀಯ ನಿವಾಸಿಗಳು, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸೇರಿದಂತೆ ತುರ್ತು ಎಲ್ಲರೂ ತುರ್ತಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಾಳುಗಳನ್ನು ಮುಂಡಕಯಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಮತ್ತು ಪಾಲಾದ ಮಾರ್ ಸ್ಲೀವಾ ಮೆಡಿಸಿಟಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.