Monday, September 25, 2023

Latest Posts

ಮಡಿಕೇರಿಯಲ್ಲಿ ವೀರ ಸೇನಾನಿಯ ಪ್ರತಿಮೆಯ ವೃತ್ತಕ್ಕೆ ಬಸ್ ಡಿಕ್ಕಿ: ಹಾನಿ

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಸ್ ಡಿಕ್ಕಿಯಾಗಿ ಹಾನಿ ಮಾಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ವೀರ ಸೇನಾನಿಯ ಪ್ರತಿಮೆಯ ವೃತ್ತಕ್ಕೆ ಬಸ್ ಡಿಕ್ಕಿಯಾಗಿದೆ.

ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ವೃತ್ತಕ್ಕೆ ಶುಕ್ರವಾರ ಸಂಜೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿದ್ದು, ಇದರಿಂದ ವೃತ್ತಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಪ್ರತಿಮೆಗೆ ಹಾನಿಯಾಗಿಲ್ಲ.

ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‌ನ ಹಿಂಬದಿ ಡಿಕ್ಕಿಯಾಗಿದ್ದು, ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಸೇರಿದ ಕೊಡವ ಸಮಾಜ, ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಲ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಡಿಪೋ ವ್ಯವಸ್ಥಾಪಕಿ ಗೀತಾ ಅವರನ್ನು ತರಾಟೆಗೆ ತೆಗೆದುಕೊಂಡರು.

ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕೂಡಾ ಸ್ಥಳಕ್ಕಾಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು.
ವಾರದ ಹಿಂದೆಯಷ್ಟೇ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಾನಿಯಾಗಿತ್ತು. ಇದೀಗ ಮತ್ತೊಂದು ವೃತ್ತದಲ್ಲಿ ಈ ರೀತಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!