ಹೊಸದಿಗಂತ ವರದಿ, ಮದ್ದೂರು :
ಹಿಂಬದಿಯ ಆಕ್ಸೆಲ್ ತುಂಡಾಗಿ ಖಾಸಗಿ ಬಸ್ಸೊಂದು ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ತಾಲೂಕಿನ ಅಗರಲಿಂಗನದೊಡ್ಡಿ ಬಳಿ ನಡೆದಿದೆ.
ಲೋಕೇಶ್, ಭಾರತಿ, ಮಹಾದೇವಮ್ಮ, ಅಂಬುಜ, ಮಹದೇವೇಶ್ವರಿ, ಕೌಶಲ್ಯ, ಕಿಶಾನ್, ಲೋಕೇಶ್, ದೇವಿ, ಕಲಾ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಅಗರಲಿಂಗನದೊಡ್ಡಿ ಹೆದ್ದಾರಿ ಬಳಿ ಖಾಸಗಿ ಬಸ್ ಹೆದ್ದಾರಿಯ ಸಿಮೆಂಟ್ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಅಕ್ಸೆಲ್ ತುಂಡರಿಸಿ ರಸ್ತೆ ಬದಿಗೆ ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 25 ಜನಕ್ಕೆ ತೀವ್ರ ಗಾಯವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ವಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಅಕ್ಕಪಕ್ಕದ ಬಡಾವಣೆಯವರು ಶಿಂಷಾ ಮಾರಮ್ಮ ದೇವಸ್ಥಾನದ ಬಳಿ ಪೂಜೆ ಇರಿಸಿಕೊಂಡಿದ್ದರು. ಅಲ್ಲಿಗೆ ತೆರಳಿ ಊಟ ಮುಗಿಸಿ ನಂತರ ಬೆಂಗಳೂರಿಗೆ ವಾಪಸ್ ಹೋಗುವಾಗ ಮದ್ದೂರು ತಾಲ್ಲೂಕಿನ ಅಗರಲಿಂಗನದೊಡ್ಡಿ ಬಳಿ ಈ ಘಟನೆ ಜರುಗಿದೆ

