SHOCKING | ಫ್ರೆಂಡ್‌ಶಿಪ್ ಬೇಡ ಎಂದಿದ್ದಕ್ಕೆ ಮಹಿಳೆಯನ್ನು ಕೊಂದ ಕ್ಯಾಬ್ ಡ್ರೈವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಇಂದಿರಾನಗರದಲ್ಲಿ ಮಹಿಳೆಯನ್ನು ಕ್ಯಾಬ್ ಡ್ರೈವರ್ ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿ ಶವವನ್ನು ಎಸೆದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆಯ ಖಾಸಗಿ ಕಂಪನಿಯೊಂದರಲ್ಲಿ ದೀಪಾ ಕೆಲಸ ಮಾಡುತ್ತಿದ್ದರು. ಕ್ಯಾಬ್ ಚಾಲಕ ಭೀಮಾರಾವ್ ಅದೇ ಕಂಪನಿಯಲ್ಲಿ ಡ್ರೈವರ್ ಆಗಿದ್ದ. ದಿನವೂ ದೀಪಾರನ್ನು ಪಿಕಪ್ ಹಾಗೂ ಡ್ರಾಪ್ ಮಾಡೋದು ಭೀಮಾರಾವ್ ಕೆಲಸವಾಗಿತ್ತು.

ಆತ ನನ್ನನ್ನು ಫ್ರೆಂಡ್ ಎಂದು ತಿಳಿದುಕೊಳ್ಳಿ, ಸ್ನೇಹದಿಂದ ಇರಿ ಎಂದು ಪದೇ ಪದೆ ಹೇಳುತ್ತಿದ್ದ. ಇದಕ್ಕೆ ದೀಪಾ ಸೊಪ್ಪು ಹಾಕಿರಲಿಲ್ಲ. ದೀಪಾರ ಮೇಲಿದ್ದ ಮೋಹದಿಂದ ಹೇಗಾದರೂ ಮಾಡಿ ಸ್ನೇಹ ಸಂಪಾದಿಸಲು ಪ್ರಯತ್ನ ಮಾಡಿದ್ದ. ಆದರೆ ದೀಪಾಗೆ ಇದ್ಯಾವುದೂ ಇಷ್ಟವಿರಲಿಲ್ಲ.

ದೀಪಾರನ್ನು ಮನೆಯಿಂದ ಪಿಕಪ್ ಮಾಡಿದ ನಂತರ ಅವರ ಜತೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಸಿಟ್ಟಿನಲ್ಲಿ ಆತ ಕಬ್ಬಿಣದ ಜಾಕ್‌ರಾಡ್‌ನಿಂದ ದೀಪಾ ಮೇಲೆ ಹಲ್ಲೆ ಮಾಡಿದ್ದು, ದೀಪಾ ಮೃತಪಟ್ಟಿದ್ದಾರೆ. ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ದೀಪಾ ಮೃತದೇಹ ಎಸೆದು ಪರಾರಿಯಾಗಿದ್ದಾನೆ.

ಮೃತದೇಹದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಶವಪರೀಕ್ಷೆಗೆ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿತ್ತು. ಪೊಲೀಸರು ಇದು ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿದ್ದರು.

ದೀಪಾರ ಬಟ್ಟೆ ಹಾಗೂ ವಾಚ್ ಮೂಲಕ ಅವರ ಗುರುತು ಪತ್ತೆ ಹಚ್ಚಲಾಗಿತ್ತು. ಅದೇ ವೇಳೆಗೆ ಮನೆಯವರು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ಭೀಮಾರಾವ್‌ನನ್ನು ಬಂಧಿಸಿದ್ದು, ವಿಚಾರಣೆ ಆರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!