ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆಪ್ರಧಾನಿ ನರೇಂದ್ರ ಮೋದಿ ಅವರು ಬೊಜ್ಜಿನ ವಿರುದ್ಧ ಹೋರಾಡಲು ಮತ್ತು ಎಣ್ಣೆ ಅಂಶವಿರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಲು ಕರೆ ನೀಡಿದ್ದರು. ಇದಕ್ಕೆ ನಟರು, ವೈದ್ಯರು, ಕ್ರೀಡಾಪಟುಗಳಿಂದ ವ್ಯಾಪಕ ಬೆಂಬಲ ದೊರೆತಿದೆ.
ಡೆಹ್ರಾಡೂನ್ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಬೊಜ್ಜಿನ ಸಮಸ್ಯೆ ಹೇಗೆ ವೇಗವಾಗಿ ಹೆಚ್ಚುತ್ತಿದೆ. ಬೊಜ್ಜಿನ ಸಮಸ್ಯೆ ಕಳವಳಕಾರಿ ವಿಷಯವಾಗಿದೆ. ಏಕೆಂದರೆ ಬೊಜ್ಜು ಮಧುಮೇಹ, ಹೃದಯ ಕಾಯಿಲೆಯಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದರು.
ಈ ವೇಳೆ ಫಿಟ್ ಇಂಡಿಯಾ ಆಂದೋಲನದ ಬಗ್ಗೆ ಮಾತನಾಡಿದ ಮೋದಿ, ಸಮತೋಲಿತ ಸೇವನೆ ಮಾಡಿ. ವ್ಯಾಯಾಮ ಮತ್ತು ಆಹಾರದ ಮಹತ್ವ ತಿಳಿದುಕೊಳ್ಳಿ ಎಂದಿದ್ದರು. ಆಹಾರದಲ್ಲಿ ಅನಾರೋಗ್ಯಕರ ಕೊಬ್ಬು ಮತ್ತು ಎಣ್ಣೆಯನ್ನು ಕಡಿಮೆ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದ್ದರು. ದೈನಂದಿನ ಎಣ್ಣೆ ಸೇವನೆಯನ್ನು 10% ಕಡಿಮೆ ಮಾಡುವ ಕುರಿತು ಅವರು ಸಲಹೆಯನ್ನು ನೀಡಿದ್ದರು.
ಪ್ರಧಾನಿ ಮೋದಿಯವರ ಈ ಸಲಹೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ವೈದ್ಯರು ಬೆಂಬಲ ಸೂಚಿಸಿದ್ದಾರೆ.
ಆರೋಗ್ಯವಿದ್ದರೆ ಎಲ್ಲವೂ ಸಿಗುತ್ತದೆ ಎಂದ ಅಕ್ಷಯ್ ಕುಮಾರ್
ಪ್ರಧಾನಿ ಮೋದಿ ಅವರ ಬೊಜ್ಜಿನ ವಿರುದ್ಧದ ಹೋರಾಟವನ್ನು ನಟ ಅಕ್ಷಯ್ ಕುಮಾರ್ ಶ್ಲಾಘಿಸಿದ್ದಾರೆ. ಮೋದಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವ್ಯಾಯಾಮ, ನಿದ್ರೆ, ಸಂಸ್ಕರಿಸಿದ ಆಹಾರವನ್ನು ಸೇವಿಸದಿರುವುದು ಮತ್ತು ದೇಸಿ ತುಪ್ಪವನ್ನು ಬಳಸಬೇಕೆಂದು ಮನವಿ ಮಾಡಿದ್ದಾರೆ.
ಎಷ್ಟು ನಿಜವಾದ ಮಾತು ಹೇಳಿದ್ದಾರೆ! ನಾನು ಇದನ್ನು ಹಲವು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ಪ್ರಧಾನಿ ಮೋದಿ ಸ್ವತಃ ಈ ಬಗ್ಗೆ ಹೇಳಿರುವುದು ನನಗೆ ತುಂಬಾ ಇಷ್ಟವಾಯಿತು. ಆರೋಗ್ಯ ಹೈ ತೋ ಸಬ್ ಕುಚ್ ಹೈ (ಆರೋಗ್ಯವಿದ್ದರೆ ಎಲ್ಲವೂ ಸಿಗುತ್ತದೆ). ಬೊಜ್ಜು ನಿಯಂತ್ರಿಸಲು ಉತ್ತಮ ಆಹಾರ ಸೇವಿಸುವುದು ಮಾತ್ರವಲ್ಲದೆ ಸಾಕಷ್ಟು ನಿದ್ರೆ ಮಾಡುವುದು ಕೂಡ ಅಗತ್ಯ. ಉತ್ತಮ ಗಾಳಿ ಮತ್ತು ಬೆಳಕು ಇರುವಂತೆ ನೋಡಿಕೊಳ್ಳಿ. ಸಂಸ್ಕರಿಸಿದ ಆಹಾರ ಸೇವಿಸಬೇಡಿ, ಎಣ್ಣೆ ಅಂಶ ಕಡಿಮೆಯಿರುವ ಆಹಾರ ಸೇವಿಸಿ. ದೇಸಿ ತುಪ್ಪ ಬಳಸಿ. ಆಗಾಗ ವಾಕಿಂಗ್ ಮಾಡಿ ಎಂದು ಅಕ್ಷಯ್ ಕುಮಾರ್ ಸಲಹೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಪ್ರಧಾನಿ ಮೋದಿ ಹೇಳಿಕೆಗೆ ಪೂರಕವಾಗಿ ನಿಯಮಿತ ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಬೊಜ್ಜನ್ನು ನಿಯಂತ್ರಿಸಬಹುದು ಎಂದು ಹೇಳಿದೆ.
ಶ್ಲಾಘನೀಯ ನಡೆ ಎಂದ ವಿಜೇಂದರ್ ಸಿಂಗ್
ಪ್ರಧಾನಿ ಮೋದಿಯವರ ‘ಫಿಟ್ ಇಂಡಿಯಾ’ ಆಂದೋಲನದ ಕುರಿತು ಮಾತನಾಡಿರುವ ಬಾಕ್ಸರ್ ವಿಜೇಂದರ್ ಸಿಂಗ್, ಸಮತೋಲಿತ ಆಹಾರ, ವ್ಯಾಯಾಮ ಮತ್ತು ಆರೋಗ್ಯದ ಕುರಿತು ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಅಭಿಯಾನವು ಶ್ಲಾಘನೀಯ. ಇದು ಅನೇಕ ಜನರಿಗೆ, ವಿಶೇಷವಾಗಿ ಮಧುಮೇಹ ಅಥವಾ ಬೊಜ್ಜು ಇರುವವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ತಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ವ್ಯಾಯಾಮಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ, ಜನರು ತಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಇದು ಅತ್ಯಂತ ಶ್ಲಾಘನೀಯ. ಪ್ರಧಾನ ಮಂತ್ರಿಯವರ ಈ ಅಭಿಯಾನವನ್ನು ನಾವು ಸ್ವಾಗತಿಸುತ್ತೇವೆ. ಅವರು ನಿಜವಾಗಿಯೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ” ಎಂದು ಹೇಳಿದ್ದಾರೆ.