ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿ.ಟಿ ರವಿ ಅವರನ್ನು ಕೊಲೆಗಡುಕ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕು ಎಂದು ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಓರ್ವ ಸಂಭಾವಿತ ರಾಜಕಾರಣಿ. ಉತ್ತಮ ರಾಜಕಾರಣಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಾಣಕ್ಕೆ ಅಪಾಯ ತರುವ ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಕುಗ್ಗುವಂತೆ ಮಾಡಿದ್ದಾರೆ. ಸಭಾಪತಿಗಳೇ ಯಾವುದೇ ರೆಕಾರ್ಡ್ ಇಲ್ಲಾ ಎಂದು ಹೇಳಿದ್ದಾರೆ. ಕಾಂಗ್ರೆಸ್ನವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ. ಯಾವುದೋ ವಿಡಿಯೋ ತೋರಿಸಿ ಸಿ.ಟಿ ರವಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಸಿ.ಟಿ ರವಿಯನ್ನು ಕೊಲೆಗಡುಕ ಎಂದು ಹೇಳಿದ್ದಾರೆ. ಹಾಗಾದರೆ ಅವರು ಕೊಲೆ ಮಾಡಿದ್ದಾರಾ? ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಟೆರರಿಸ್ಟ್ರಂತೆ ರಾತ್ರಿಯೆಲ್ಲಾ ಬೇರೆಡೆ ಓಡಾಡಿಸಿದ್ದಾರೆ. ರಾತ್ರಿಯೆಲ್ಲಾ ಓಡಾಡಿಸಿ ಹಿಂಸೆ ಕೊಡುವ ಅವಶ್ಯಕತೆ ಇತ್ತಾ? ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಸಿ.ಟಿ ರವಿ ಮೇಲೆ ಹಲ್ಲೆ ಮಾಡಿದವರನ್ನು ಬಂಧನಕೊ ಮಾಡಬೇಕು ಹಾಗೂ ಕೊಲೆಗಡುಕ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.