ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿನ ಅನಧಿಕೃತ ಹೋರ್ಡಿಂಗ್ ಗಳು, ಬ್ಯಾನರ್ ಗಳು ಮತ್ತು ಫ್ಲೆಕ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿದ್ದು, ದೇಶದ ಅತ್ಯುತ್ತಮ ನಗರವನ್ನು ಬೇರೆಯವರು ಹಾಳು ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ವಿಭಾಗೀಯ ಪೀಠ, ನ್ಯಾಯಾಲಯ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.
ಅಧಿಕಾರಿಗಳು ಸುಖಾಸುಮ್ಮನೆ ಮೌನವಾಗಿದ್ದರೆ ಮತ್ತು ಮೃದು ಧೋರಣೆ ಹೊಂದಿದ್ದರೆ ಅದನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ‘ ಮಲಗುತ್ತಿರುವವರನ್ನು ಎಬ್ಬಿಸಬಹುದು. ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಪೀಠ ಗಾದೆಯನ್ನು ಉಲ್ಲೇಖಿಸಿ ಕಿಡಿ ಕಾರಿದೆ.