ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶುದ್ಧ ಮನಸ್ಸಿನಿಂದ, ನಂಬಿಕೆ ಇಟ್ಟು ಪ್ರಾರ್ಥಿಸಿಕೊಂಡಲ್ಲಿ ಕಲಿಯುಗದಲ್ಲೂ ದೈವ, ದೇವರು ಭಕ್ತರ ಕಷ್ಟ ಪರಿಹರಿಸುತ್ತಾನೆ ಎಂಬ ನಂಬಿಕೆಗೆ, ಅದರಲ್ಲೂ ವಿಶೇಷವಾಗಿ ತುಳುನಾಡಿನ ದೈವಗಳ ಕಾರಣಿಕಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಮಂಗಳೂರು ತಾಲೂಕಿನ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಕೇರಳ ಮೂಲದ ಕುಟುಂಬವೊಂದರ ಆರೋಗ್ಯ ಸಮಸ್ಯೆಗೆ ನೆಮ್ಮದಿಯ ಫಲಿತಾಂಶ ಸಿಕ್ಕಿದೆ. ಪವಾಡ ಸದೃಶವೆನ್ನಲಾದ ಈ ವಿಷಯ ಎಲ್ಲೆಡೆ ಭಾರೀ ಪ್ರಚಾರದಲ್ಲಿದೆ.
ಕೇರಳದ ಎರ್ನಾಕುಲಂನ ಉತ್ತರ ಪರೂರಿನ ಕುಮಾರ್ ಎಂಬವರ ಪತ್ನಿಯ ಹಿರಿ ಸಹೋದರಿ ಮಾಯಾ ಎಂಬವರು ಕಳೆದ ಐದಾರು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕುಮಾರ್ ಮಂಗಳೂರಿನ ಕಂಕನಾಡಿಯಲ್ಲಿ ಬ್ಯಾಕೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ.
ಮಾಯಾ ಅವರಿಗೆ ತಗುಲಿರುವ ಕ್ಯಾನ್ಸರ್ ವಾಸಿಗಾಗಿ ಒಂದು ವರ್ಷದ ಹಿಂದೆ ಶ್ರೀ ವೈದ್ಯನಾಥ ದೈವಸ್ಥಾನವೊಂದಕ್ಕೆ ಹೋಗಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು. ಕಳೆದ ವರ್ಷ ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನದ ವಾರ್ಷಿಕ ಬಂಡಿ ಜಾತ್ರೆ ನಡೆಯುವುದಕ್ಕಿಂತ ಎರಡು ತಿಂಗಳ ಮೊದಲು ಗುರುಪುರದ ವೈದ್ಯನಾಥ ಕ್ಷೇತ್ರಕ್ಕೆ ಬಂದಿದ್ದ ಕುಮಾರ್ ಮತ್ತವರ ಕುಟುಂಬ, ಮಾಯಾ ಅವರ ಖಾಯಿಲೆ ವಾಸಿಯಾದಲ್ಲಿ ದೈವಕ್ಕೆ ಕಿರು ಸೇವೆ ನೀಡುತ್ತೇವೆ ಎಂದು ಪ್ರಾರ್ಥಿಸಿಕೊಂಡಿದ್ದರು.
ದೈವಸ್ಥಾನದ ವೈದ್ಯನಾಥ ಪಾತ್ರಿ ಕೌಡೂರು ಚಂದ್ರಹಾಸ ಪೂಜಾರಿ ಅವರಿಂದ ದೈವದ ಪ್ರಸಾದ ಸ್ವೀಕರಿಸಿದ್ದ ಕುಮಾರ್ ಕುಟುಂಬ, ಕಳೆದ ವರ್ಷ ಫೆಬ್ರವರಿಯಲ್ಲಿ ಗುರುಪುರ ಬಂಡಿ ಜಾತ್ರೆಗೆ ಆಗಮಿಸಿದ್ದು, ಮಾಯಾ ಅವರಿಗೆ ತಗುಲಿದ್ದ ರಕ್ತರ ಕ್ಯಾನ್ಸರ್ ವಾಸಿಯಾಗುತ್ತಿದೆ ಎಂಬ ವಿಚಾರ ತಿಳಿಸಿದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರೂ ಈ ವಿಚಾರವನ್ನು ದೃಡೀಕರಿಸಿದ್ದರು. ಈ ಹಿನ್ನಲೆ ಯಲ್ಲಿ ಕುಮಾರ್ ಹಾಗೂ ಅವರ ಕುಟುಂಬ ಅ. 5ರಂದು ಗುರುಪುರಕ್ಕೆ ಮತ್ತೊಮ್ಮೆ ಆಗಮಿಸಿದ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಯಲ್ಲಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.