ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಟ್ಟಲೆ ತಯಾರಿ, ನಿದ್ದೆಯಿಲ್ಲದ ರಾತ್ರಿಗಳು, ಡಿಸಿಪ್ಲಿನ್ ಆದ ಜೀವನಶೈಲಿ, ಸಾವಿರ ಸಾವಿರ ದುಡ್ಡನ್ನು ಖರ್ಚು ಮಾಡಿ ಪರೀಕ್ಷೆಗೆ ತಯಾರಾದ ವಿದ್ಯಾರ್ಥಿಗಳು ಬರೀ ಐದು ನಿಮಿಷ ಲೇಟಾಗಿ ಬಂದು ಎಕ್ಸಾಂ ಬರೆಯಲು ಸಾಧ್ಯವಾಗಿಲ್ಲ! ಈಗ ಕಣ್ಣೀರು ಬಿಟ್ಟು ಮತ್ತೇನೂ ಇಲ್ಲ..
ರಾಜಧಾನಿ ಬೆಂಗಳೂರು ಹಾಗೂ ಕೊಪ್ಪಳದಲ್ಲಿ ನೀಟ್ ಮರುಪರೀಕ್ಷೆ ಬರೆಯಲು ತಡವಾಗಿ ಬಂದ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಹಿಸಲಾಗಿದೆ. ಇದರಿಂದ ಕಣ್ಣೀರಿಡುತ್ತಾ ವಿದ್ಯಾರ್ಥಿಯರು ಮನೆಗೆ ಬಂದಿದ್ದಾರೆ. ಬೆಂಗಳೂರಿನ ಆರ್ಸಿ ಕಾಲೇಜಿನ ಬಳಿ ಮೂವರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ನಿಗದಿತ ಸಮಯದ ನಂತರ ಬಂದಿದ್ದಕ್ಕೆ ಭದ್ರತಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ.
ಬಸ್ ಸಿಗಲಿಲ್ಲ, ತುಂಬಾ ಟ್ರಾಫಿಕ್ ಇತ್ತು ಇದರಿಂದ ಐದು ನಿಮಿಷ ಲೇಟಾಗಿದೆ. ದಯವಿಟ್ಟು ಅವಕಾಶ ಕೊಡಿ ಎಂದು ಗೇಟ್ ಬಳಿ ಗೋಗರೆದಿದ್ದಾರೆ. ಆದರೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿಲ್ಲ. ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಕೈತಪ್ಪಿದ್ದಕ್ಕೆ ವಿದ್ಯಾರ್ಥಿನಿಯರು ಅಳುತ್ತಾ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.
ಗಂಗಾವತಿ ಮೂಲದ ಪಾತಿಮಾ ಎಂಬ ವಿದ್ಯಾರ್ಥಿನಿ ನೀಟ್ ಮರುಪರೀಕ್ಷೆ ಬರೆಯಲು ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ವಿದ್ಯಾರ್ಥಿನಿ ಪರೀಕ್ಷೆ ಆರಂಭವಾದ 23 ನಿಮಿಷಗಳ ನಂತರ ಕೇಂದ್ರಕ್ಕೆ ಬಂದಿರುವ ಕಾರಣ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಇದರಿಂದ ಆಕೆ ಕಣ್ಣೀರು ಹಾಕುತ್ತಾ ಮನೆಗೆ ಹೋಗಿದ್ದಾಳೆ.



