ಹೊಸದಿಗಂತ ವರದಿ,ಮೈಸೂರು:
ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಎಸ್ಪಿ ರಾಜ್ಯಸಮಿತಿ ವತಿಯಿಂದ ನಿಯೋಜನೆಗೊಂಡಿದ್ದ ರೇವತಿರಾಜ್ ರವರ ನಾಮಪತ್ರ ತಿರಸ್ಕಾರಗೊಂಡು ಪಕ್ಷಕ್ಕೆ ಬಹಳ ಮುಜುಗರ ಮತ್ತು ಅಪಮಾನ ಉಂಟುಮಾಡಿದ ಆರೋಪದ ಮೇಲೆ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಉಚ್ಚಾಟಿಸಲಾಗಿದೆ.
ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರೇವತಿರಾಜ್ ಅವರ ನಾಮಪತ್ರ ಸಲ್ಲಿಕೆ ಮತ್ತು ಮೈಸೂರು-ಕೊಡಗು ಲೋಕಸಭಾಕ್ಕೆ ಸಂಬoಧಿಸಿದ ಚುನಾವಣೆ ಪ್ರಚಾರ ಕಾರ್ಯಗಳನ್ನು ಬಿಎಸ್ಪಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಯವರಿಗೆ ಒಪ್ಪಿಸಿ, ಇವರನ್ನು ತಾರಾ ಪ್ರಚಾರಕರನ್ನಾಗಿಯೂ ಪಕ್ಷವು ನೇಮಕ ಮಾಡಿತ್ತು. ಆದರೆ ಪುಟ್ಟಸ್ವಾಮಿಯವರು ನಾಮಪತ್ರದ ದಾಖಲೆಗಳನ್ನು ಸರಿಪಡಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷತೆಯಿಂದ ವರ್ತಿಸಿದ್ದು, ನಾಮಪತ್ರ ತಿರಸ್ಕಾರಕ್ಕೆ ನೇರ ಹೊಣೆಗಾರರಾಗಿರುತ್ತಾರೆ.
ನಾಮಪತ್ರವು ತಿರಸ್ಕಾರಗೊಂಡಿರುವುದು ಪಕ್ಷಕ್ಕೆ ಮುಜುಗರ ಮತ್ತು ಅಪಮಾನ ಉಂಟಾಗಿರುವ ಬಗ್ಗೆ ಅಭ್ಯರ್ಥಿಯಾಗಿದ್ದ ರೇವತಿರಾಜ್ರವರು, ಜಿಲ್ಲಾ ಕಾರ್ಯಕರ್ತರು ಮತ್ತು ಬೆಂಬಲಿಗರು ಬಹಳ ನಿರಾಶರಾಗಿದ್ದಾರೆ. ಈ ಬೆಳವಣಿಗೆಯ ಬಗ್ಗೆ ರಾಜ್ಯಸಮಿತಿಯು ಕೇಂದ್ರ ಸಮಿತಿಗೆ ವರದಿ ನೀಡಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಮಿತಿಯೂ ಸಹ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯಸಮಿತಿಗೆ ಸೂಚಿಸಿದೆ.
ಆದ ಕಾರಣ ಬಿಎಸ್ಪಿ ಪಕ್ಷದ ಮೈಸೂರು ಜಿಲ್ಲೆಯ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಬಿಎಸ್ಪಿ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ. ಈ ವಿಚಾರದಲ್ಲಿ ಪುಟ್ಟಸ್ವಾಮಿಯ ಜತೆಗೆ ಬಿಎಸ್ಪಿ ಕಾರ್ಯಕರ್ತ ಡಾ. ಚನ್ನಕೇಶವಮೂರ್ತಿಯು ಸಹ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿರುವುದರಿಂದ. ಅವರನ್ನೂ ಸಹ ಪಾರ್ಟಿಯ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.