ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಉಪರಾಷ್ಟ್ರಪತಿ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಆಗಸ್ಟ್ 6 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತಯಾರಿ ನಡೆಯುತ್ತಿದೆ.
ಇದರ ನಡುವೆ ಎನ್ಡಿಎ ಕೂಟವೂ ಅಚ್ಚರಿಯ ಅಭ್ಯರ್ಥಿಯ ಆಯ್ಕೆ ನಡೆಸುವ ಚಿಂತನೆ ನಡೆಸಿದ್ದು, ಪಂಜಾಬ್ ಮಾಜಿ ಸಿಎಂ, ಪಂಜಾಬ್ ಲೋಕ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿಲು ತಯಾರಿ ನಡೆಸಿದೆ ಎಂದು ಅಮರಿಂದರ್ ಕಚೇರಿ ಮಾಹಿತಿ ನೀಡಿದೆ.
ಪಂಜಾಬ್ ವಿಧಾನಸಭಾ ಚುನಾವಣಗೂ ಮುನ್ನ ಪಂಜಾಬ್ ಕಾಂಗ್ರೆಸ್ನಲ್ಲಿನ ಭಿನ್ನಮತ ಸ್ಫೋಟದಿಂದ ಪಕ್ಷ ಬಿಟ್ಟು ಹೊರಬಂದ ಸಿಂಗ್, ತನ್ನದೇ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಇಷ್ಟೇ ಅಲ್ಲ ಎನ್ಡಿಎ ಕೂಟಕ್ಕೆ ಸೇರಿಕೊಂಡಿದ್ದರು.
ಸದ್ಯ 80 ವರ್ಷದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸದ್ಯ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾದ ಅಮರಿಂದರ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಭಾನುವಾರ ಅಮರಿಂದರ್ ಸಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಇತ್ತ ಪ್ರಧಾನಿ ನರೇಂದ್ರ ಮೋದಿ ಅಮರಿಂದರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ಅಭ್ಯರ್ಥಿ ಕುರಿತ ಮಾತುಕತೆಯೂ ನಡೆದಿದೆ ಎಂದು ಅಮರಿಂದರ್ ಸಿಂಗ್ ಕಚೇರಿ ಮಾಹಿತಿ ಬಹಿರಂಗ ಪಡಿಸಿದೆ.
ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜು.20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು ಜು.22 ಕೊನೆಯ ದಿನ.
ಈ ಚುನಾವಣೆಗೆ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಮಾತ್ರ ಮತದಾರರು. ರಾಜ್ಯಗಳ ಶಾಸಕರಿಗೆ ಅವಕಾಶವಿಲ್ಲ. ಲೋಕಸಭೆಯಲ್ಲಿ ಎನ್ಡಿಎ ಬಹುಮತ ಹೊಂದಿದ್ದು, ರಾಜ್ಯಸಭೆಯಲ್ಲೂ ಬಹುಮತದ ಅಂಚಿನಲ್ಲಿದೆ ಹೀಗಾಗಿ ಎನ್ಡಿಎ ಅಭ್ಯರ್ಥಿಯೇ ಉಪರಾಷ್ಟ್ರಪತಿ ಆಗುವುದು ನಿಶ್ಚಿತ.