ಕಾರು-ಬೈಕ್ ಭೀಕರ ಅಪಘಾತ: ಮಗಳು ಸಾವು, ತಾಯಿ- ಸಹೋದರ ಗಾಯ

ಹೊಸದಿಗಂತ ವರದಿ, ಮದ್ದೂರು:

ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗಳು ಸ್ಥಳದಲ್ಲೆ ಮೃತಪಟ್ಟು, ತಾಯಿ, ಸಹೋದರ ಹಾಗೂ ತಾತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ರುದ್ರಾಕ್ಷಿಪುರ ಗೇಟ್ ನ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಜರುಗಿದೆ.

ತಾಲೂಕಿನ ಸಿ.ಎ.ಕೆರೆ ಹೋಬಳಿಯ ಅಂಬರಹಳ್ಳಿಯ ನಂದೀಶ್ ಪುತ್ರಿ ವೀಕ್ಷಾ (4) ಅಪಘಾತದಲ್ಲಿ ಅಸುನೀಗಿದ್ದಾಳೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ, ಈಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ವೀಕ್ಷಾ ಳ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ ಸೌಂದರ್ಯ (24), ಸಹೋದರ ವಿನೀಶ್ (3) ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ಮೃತಳ ತಾತ ಸಿ.ರಮೇಶ್ (53) ತೀವ್ರ ಗಾಯಗೊಂಡಿದ್ದು, ಇವರೆಲ್ಲರೂ ಮೈಸೂರು ನಾರಾಯಣ ಹೃದಯಾಲಯ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ರಮೇಶನ ಸ್ಥಿತಿ ಚಿಂತಾಜನಕವಾಗಿದೆ.

ಮೃತರು ಹಾಗೂ ಗಾಯಾಳುಗಳೆಲ್ಲರೂ ಕಾರ್ಯ ನಿಮಿತ್ತ ಚನ್ನಪಟ್ಟಣಕ್ಕೆ ತೆರಳಿ ತಾತ ರಮೇಶನ ಸ್ವಗ್ರಾಮ ಹುಣಸೇ ಮರದ ದೊಡ್ಡಿಗೆ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ತೆರಳುತ್ತಿದ್ದರು. ರಾತ್ರಿ 7.30 ರ ಸುಮಾರಿಗೆ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ರುದ್ರಾಕ್ಷಿಪುರ ಗೇಟ್ ಬಳಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಘಟನೆ ಸಂಬಂಧ ಪೋಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!