Friday, January 23, 2026
Friday, January 23, 2026
spot_img

ಕಾರು ಚಾಲಕನ ಮೇಲೆ ಹಲ್ಲೆ : ಮೊಬೈಲ್, ಹಣ ದೋಚಿ‌ದ ಕಿಡಿಗೇಡಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗ ನಗರದ ಪ್ರತಿಷ್ಠಿತ ರೆಸಾರ್ಟ್ ಒಂದರ​​ ಮಾಲೀಕರ ಕಾರು ಚಾಲಕನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿ, ಮೊಬೈಲ್ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ.

ಚಾಲಕ ಎಂದಿನಂತೆ ಸಹೋದ್ಯೋಗಿಯೊಬ್ಬರ ಜೊತೆ ನಾಯಿಗಳನ್ನು ವಾಕಿಂಗ್ ಮಾಡಿಸಲು ರೆಸಾರ್ಟ್‌ಗೆ ತೆರಳಿದ್ದರು. ಜ.1ರ ರಾತ್ರಿ ಸುಮಾರು 8:45ರ ವೇಳೆಗೆ ರೆಸಾರ್ಟ್‌ನಿಂದ ವಾಪಸ್ ಬರುತ್ತಿದ್ದಾಗ, ಸಾಗರ ರಸ್ತೆಯ ಆಲ್ಕೊಳ ಸರ್ಕಲ್ ಬಳಿ ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಇನೋವಾ ಕಾರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ಭಯಗೊಂಡ ಚಾಲಕ ವಾಜಪೇಯಿ ಲೇಔಟ್ ರಸ್ತೆಯತ್ತ ಕಾರು ತಿರುಗಿಸಿದರು. ಅವರನ್ನು ಬೆನ್ನಟ್ಟಿದ ದರೋಡೆಕೋರರು ರಸ್ತೆ ಮಧ್ಯೆ ತಡೆದಿದ್ದಾರೆ.

ಕಾರು ನಿಲ್ಲಿಸುತ್ತಿದ್ದಂತೆಯೇ ಕಬ್ಬಿಣದ ರಾಡ್​ನಿಂದ ಕಾರಿನ ಗ್ಲಾಸ್ ಪುಡಿಪುಡಿ ಮಾಡಿದ ಕಿಡಿಗೇಡಿಗಳು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಚಾಲಕ ಹಾಗೂ ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿ, ಚಾಲಕನ ಮೊಬೈಲ್‌ನಿಂದ ಬಲವಂತವಾಗಿ ಸ್ಕ್ಯಾನರ್ ಮೂಲಕ 4,000 ರೂ. ಫೋನ್-ಪೇ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಚಾಲಕನ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್ ಹಾಗೂ ಸಹೋದ್ಯೋಗಿ ಬಳಿಯಿದ್ದ 16 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Must Read